ಬೆಳ್ತಂಗಡಿ : ವಿಧಾನಸಭೆ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಗೊಳಿಸಲಾಗಿದ್ದು, ಚುನಾವಣಾಧಿಕಾರಿಗಳು ಅಲರ್ಟ್ ಆಗಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ಧ ಎರಡು ಪ್ರತ್ಯೇಕ ದೂರು ದಾಖಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಶೇಖರ ಲಾಯಿಲ ಬೆಳ್ತಂಗಡಿ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದು, ದೂರಿನಲ್ಲಿ ನೀತಿಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅವರು ಪತ್ರಿಕೆಗೆ ಹಣ ಕೊಟ್ಟು ಹರೀಶ್ ಪೂಂಜ ಹೆಸರಿನಲ್ಲಿ ಅಕ್ರಮ ಸಕ್ರಮ ಯೋಜನೆಯನ್ನು ಶಾಸಕರ ಸಾಧನೆ ಎಂದು ಬಿಂಬಿಸಿ ಜಾಹೀರಾತು ನೀಡಿದ್ದಾರೆ. ಹಾಗೂ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಗ್ರಾಮ ವಿಕಾಸ ಹಬ್ಬದ ಹೆಸರಿನಲ್ಲಿ ಮಾ.30 ರಂದು ಬಲಿಂಜೆ ಎಂಬಲ್ಲಿ ಸಭಾ ಕಾರ್ಯಕ್ರಮ ನಡೆಸಿ ಬಳಿಕ ಜನರಿಗೆ ಊಟೋಪಚಾರ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.ಈ ಎರಡು ಪ್ರತ್ಯೇಕ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳು ದೂರು ದಾಖಲು ಮಾಡಿದ್ದು, ತನಿಖೆ ನಡೆಸಲಾಗುತ್ತಿದೆ.
Author: main-admin
ಮುಂಬೈ: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟಿದ್ದು, ಆತನ ಪತ್ನಿಯು ಮರುಮದುವೆಯಾಗಿರುವ ವಿಷಯವು ಮೋಟಾರು ವಾಹನ ಕಾಯ್ದೆಯಡಿ ಆಕೆಗೆ ಪರಿಹಾರ ನಿರಾಕರಣೆಗೆ ಕಾರಣವಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 2010ರಲ್ಲಿ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಪತ್ನಿಗೆ ಪರಿಹಾರ ನೀಡುವಂತೆ ಮೋಟಾರು ಅಪಘಾತ ಹಕ್ಕು ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಇಪ್ಕೊ ಟೋಕಿಯೊ ಜನರಲ್ ಇನ್ಶೂರೆನ್ಸ್ ಕಂಪನಿಯು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು. ನ್ಯಾ. ಎಸ್.ಜಿ.ಡಿಗೆ ನೇತೃತ್ವದ ಏಕಸದಸ್ಯ ನ್ಯಾಯಪೀಠ ಮಾ.3ರಂದು ಅರ್ಜಿಯ ವಿಚಾರಣೆ ನಡೆಸಿದ್ದು, ವಿಮಾ ಕಂಪನಿಯ ಅರ್ಜಿಯನ್ನು ವಜಾಗೊಳಿಸಿದೆ. ಪತಿಯ ಸಾವಿಗೆ ಪರಿಹಾರ ಪಡೆಯಲು ಆತನ ಪತ್ನಿಯು ಜೀವನಪರ್ಯಂತ ಅಥವಾ ಪರಿಹಾರ ಪಡೆಯುವವರೆಗೆ ವಿಧವೆಯಾಗಿ ಉಳಿಯಬೇಕು ಎಂಬುದನ್ನು ಯಾರೂ ನಿರೀಕ್ಷಿಸುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ರಸ್ತೆ ಅಪಘಾತವಾದಾಗ ಮೃತರ ಪತ್ನಿಯು 19 ವರ್ಷ ವಯಸ್ಸಿನವರಾಗಿದ್ದರು.
ಉಳ್ಳಾಲ: ಕೇರಳದಿಂದ ದಾಖಲೆಗಳಿಲ್ಲದೆ ಹಣ ಸಾಗಾಟ ನಡೆಸುತ್ತಿದ್ದ ಕಾರನ್ನು ತಡೆಹಿಡಿದ ಉಳ್ಳಾಲ ಪೊಲೀಸರು 7.95 ಲಕ್ಷ ನಗದು ಸಹಿತ ಕಾರನ್ನು ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ಕುತ್ರಿಕ್ಕೋಡು ನಿವಾಸಿ ಸುರೇಶ್ ಎಂಬವರಲ್ಲಿದ್ದ ದಾಖಲೆ ರಹಿತ ಹಣವನ್ನು ಇಂದು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಪೊಲೀಸರು ಕೇರಳ ಗಡಿಭಾಗ ತಲಪಾಡಿಯಲ್ಲಿ ವಾಹನ ತಪಾಸಣೆಗೈಯ್ಯುತ್ತಿದ್ದಾಗ ನಗದು ಪತ್ತೆಯಾಗಿದೆ. ಚುನಾವಣಾ ಆಯೋಗದ ರಿಟೈನಿಂಗ್ ಅಧಿಕಾರಿಗಳಿಗೆ ನಗದು ಹಾಗೂ ಕಾರನ್ನು ವಿಚಾರಣೆಗೆ ನೀಡಲಾಗಿದೆ. ಸುರೇಶ್ ಅವರು ಫ್ಯಾಬ್ರಿಕೇಷನ್ ವೃತ್ತಿ ನಡೆಸುವವರಾಗಿದ್ದು, ಮಂಗಳೂರಿನ ಬಂದರಿನಿಂದ ಸಾಮಗ್ರಿಗಳ ಖರೀದಿಗಾಗಿ ಹಣ ತರುತ್ತಿದ್ದರು ಎಂದು ಪ್ರಾಥಮಿಕ ವಿಚಾರಣೆ ವೇಳೆ ತಿಳಿಸಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಹಣವಾದಲ್ಲಿ ಪ್ರಕರಣ ದಾಖಲಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು : ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆಯಡಿ ವಿಶೇಷ ನೋಂದಣಿ ಮತ್ತು ಪರವಾನಿಗೆ ಆಂದೋಲನ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಉರ್ವಾಸ್ಟೋರ್ ಮೈದಾನದಲ್ಲಿ ನಡೆಯಿತು. ಡಾ ಪ್ರವೀಣ್ ಕುಮಾರ್, ಅಂಕಿತ ಅಧಿಕಾರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ, ದ. ಕ, ಮಂಗಳೂರು ಎಲ್ಲರನ್ನು ಸ್ವಾಗತಿಸಿ ಬರಮಾಡಿಕೊಂಡರು ಹಾಗೂ ಆಹಾರ ಸುರಕ್ಷತೆ, ಗುಣಮಟ್ಟದ ಬಗ್ಗೆ ವಿವರಿಸಿದರು. ಆರ್. ಕೆ. ಗಂಗಾಧರ್, ಅತ್ತಾವರ ( ಅಧ್ಯಕ್ಷರು, ದಕ್ಷಿಣ ರೈಲ್ವೆ ಪೆನ್ಷನರ್ಸ್ ಅಸೋಸಿಯೇಷನ್, ಕ್ರೀಡಾ ಪಟು, ಸಂಗೀತ ಗಾಯಕ ) ರು ಅಧ್ಯಕ್ಷತೆ ವಹಿಸಿದರು. ಡಾ ಪ್ರವೀಣ್ ರವರು, ಗಂಗಾಧರ್ ರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.ಶಿವಪ್ರಸಾದ್, ಸಂಪಾದಕರು, ಪೊಲೀಸ್ ಪತ್ರಿಕೆ ಕರ್ನಾಟಕ ಹಾಗೂ ಇತರ ಪತ್ರಿಕಾ, ಟಿವಿ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.
ಬಂಟ್ವಾಳ : ಪೇಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಯ ತಪ್ಪಿ ಬಿದ್ದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸೋರ್ನಾಡು ಎಂಬಲ್ಲಿ ನಡೆದಿದೆ.1ಮೃತರನ್ನು ಜಕ್ರಿಬೆಟ್ಟು ಪಲ್ಲಿಕಂಡ ನಿವಾಸಿ ರಾಬರ್ಟ್ ವೇಗಸ್ (51) ಎಂದು ಗುರುತಿಸಲಾಗಿದೆ. ವಿಜಯ್ ಎಂಬ ಪೇಂಟಿಂಗ್ ಗುತ್ತಿಗೆದಾರನ ಜೊತೆ ರಾಬರ್ಟ್ ವೇಗಸ್ ಅವರು ಪೇಂಟಿಂಗ್ ಕೆಲಸಕ್ಕೆ ಇದ್ದು, ಸೋರ್ನಾಡು ಎಂಬಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಸುಮಾರು 1 ಗಂಟೆ ವೇಳೆಗೆ ಆಕಸ್ಮಿಕವಾಗಿ ಮೇಲಿನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಚಿಕಿತ್ಸೆ ಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗಂಭೀರವಾಗಿ ಗಾಯಗೊಂಡ ರಾಬರ್ಟ್ ಅವರು ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ವೇಳೆ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡು;ಇಬ್ಬರು ಮದ್ರಸಾ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ಮದ್ರಾಸ ಅಧ್ಯಾಪಕನಿಗೆ 53 ವರ್ಷ ಕಠಿಣ ಸಜೆ ಮತ್ತು 3.25 ಲಕ್ಷ ದಂಡ ನ್ಯಾಯಾಲಯ ವಿಧಿಸಿದೆ. ವಿಟ್ಲ ಮೂಲದ ಅಬ್ದುಲ್ ಹನೀಫ್ ಮದನಿ(44)ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯವು ಈ ಶಿಕ್ಷೆಯನ್ನು ವಿಧಿಸಿದೆ. ದಂಡ ಪಾವತಿಸದೆ ಇದ್ದರೆ ಮೂರುವರೆ ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸುವಂತರ ಸೂಚಿಸಲಾಗಿದೆ.ಪೋಕ್ಸೋ ಎರಡು ಪ್ರಕರಣಗಳಲ್ಲಿ ತಲಾ 20 ವರ್ಷ ಹಾಗೂ ಐಪಿಸಿಯ ಇತರ ಸೆಕಸನ್ ಗಳಡಿ 53 ವರ್ಷ ಶಿಕ್ಷೆ ವಿಧಿಸಲಾಗಿದೆ. ಒಟ್ಟು 53 ವರ್ಷ ಶಿಕ್ಷೆ ವಿಧಿಸಲಾಗಿದೆ. ಅಂಬಲತ್ತರ ಪೊಲೀಸ್ ಠಾಣೆಯಲ್ಲಿ ಮದ್ರಸಾ ಶಿಕ್ಷಕನ ವಿರುದ್ಧ ಬಾಲಕರಿಗೆ( ಅಸಹಜ) ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಾಗಿತ್ತು.ಇದೀಗ ಪ್ರಕರಣದ ವಿಚಾರಣೆ ನಡೆದು ನ್ಯಾಯಾಲಯ ತೀರ್ಪು ನೀಡಿದೆ. ಈ ಮೊದಲು ಕೂಡ ಇದೇ ಶಿಕ್ಷಕನಿಗೆ ಇನ್ನೊಂದು ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ
ಮಂಗಳೂರು : ದಕ್ಷಿಣ ಕನ್ನಡದಲ್ಲೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಮಗ್ನವಾಗಿದೆ. ಕ್ರಿಮಿನಲ್ ಚಟುವಟಿಕೆ, ಹಿಂದೆ ಗಂಭಿರ ಅಪರಾಧಗಳಲ್ಲಿ ತೊಗಡಿಗೊಂಡಿದ್ದವರ ಲೀಸ್ಟ್ ಸಿದ್ದ ಪಡಿಸಿ ಅವರ ಮೇಲೂ ಕ್ರಮ ಕೈಗೊಳ್ಳುವ ಕಾರ್ಯ ಆರಂಭಿಸಿದೆ. ಜಿಲ್ಲಾ ಕೇಂದ್ರ ಸ್ಥಾನ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾರ್ಚ್ 31 ರಂದು ಅಪರಾಧ ಚಟುವಟಿಗಳಲ್ಲಿ ಗುರುತಿಸಿಕೊಂಡಿದ್ದ ವಿವಿಧ ರೌಡಿ ಶೀಟರಗಳ ಮನೆಗಳಿಗೆ ದಾಳಿ ನಡೆಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪ್ರಮುಖ 60 ರೌಡಿ ಶೀಟರ್ ಗಳ ಮನೆಗೆ ಬೆಳಗ್ಗಿನ ಜಾವ ದಾಳಿ ನಡೆಸಿದ ಪೊಲೀಸ್ ಅಧಿಕಾರಿಗಳು ಮನೆಗಳನ್ನು ಶೋಧಿಸಿ ವಿಚಾರಣೆ ನಡೆಸಿದ್ದಾರೆ. ಆಯಾಯಾ ಪ್ರದೇಶಗಳಲ್ಲಿ ಪ್ರಾಬಲ್ಯವಿರುವ ರೌಡಿ ಶೀಟರ್ಗಳು ಚುನಾವಣೆಯಲ್ಲಿ ಪ್ರಭಾವ ಬೀರುವ ಸಾಧ್ಯತೆಗಳಿರುವ ಕಾರಣ ಮುಂಜಾಗೃತಾ ಕ್ರಮವಾಗಿ ಈ ದಾಳಿಗಳನ್ನು ಸಂಘಟಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಉಪ ಆಯುಕ್ತರು ಮಾಹಿತಿ ನೀಡಿದ್ದಾರೆ
ಬೆಂಗಳೂರು : 2022-23ನೇ ಸಾಲಿನ ಎಸ್ ಎಸ್ ಎಲ್ ಸಿ (SSLC) ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದ್ದು, ಈ ಬಾರಿಯೂ ಕೊರೊನಾ ಬ್ಯಾಚ್ ಎಂದು ಪರಿಗಣಿಸಿ 26 ಗ್ರೇಸ್ ಅಂಕ ಪಡೆಯುವ ಅವಕಾಶ ಇದೆ. ಈ ಕುರಿತು ಮಾಹಿತಿ ನೀಡಿರುವ ಎಸ್ಎಸ್ ಎಲ್ ಸಿ ಬೊರ್ಡ್ ನಿರ್ದೇಶಕ ರಾಮಚಂದ್ರ, ಈ ಬಾರಿಯೂ ಕೊರೊನಾ ಬ್ಯಾಚ್ ಎಂದು ಪರಿಗಣಿಸಿ ಶೇ.10 ರಷ್ಟು ಗ್ರೇಸ್ ಅಂಕ ನೀಡಲಾಗುವುದು. ಮೂರು ವಿಷಯಗಳಿಗೆ ಮಾತ್ರ ಗ್ರೇಸ್ ಮಾರ್ಕ್ ಅಂಕ ನೀಡಲಾಗುತ್ತದೆ. ತೇರ್ಗಡೆ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. ಎಸೆಸೆಲ್ಸಿಯ 6 ವಿಷಯಗಳ ಪೈಕಿ 3 ವಿಷಯಗಳಲ್ಲಿ ಉತ್ತೀರ್ಣರಾಗಿದ್ದರೆ, ಉಳಿದ 3 ವಿಷಯಗಳಿಗೆ ತಲಾ ಶೇ. 10ರಷ್ಟು ಆದರೆ ಒಟ್ಟು 26 ಅಂಕ ಮೀರದಂತೆ ಕೃಪಾಂಕ ದೊರೆಯಲಿದೆ. ಪ್ರಥಮ ಭಾಷೆಯಲ್ಲಿ ಗರಿಷ್ಠ 10 ಅಂಕ ಮತ್ತು ಉಳಿದ ವಿಷಯಗಳಲ್ಲಿ ಗರಿಷ್ಠ 8 ಅಂಕವನ್ನು ಕೃಪಾಂಕದ ರೂಪದಲ್ಲಿ ಪಡೆಯಬಹುದಾಗಿದೆ.
ನವದೆಹಲಿ : ಕೇಂದ್ರ ಸರ್ಕಾರವು ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 91.50 ರೂ.ಗೆ ಇಳಿಕೆಯಾಗಿದ್ದು, ಈ ಮೂಲಕ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 2,028 ರೂ. ಇದೆ. ಏಪ್ರಿಲ್ 1 ರ ಇಂದು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 91.50 ರೂ.ಗೆ ಇಳಿಸಲಾಗಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2,028 ರೂ.ಇದೆ ಆದಾಗ್ಯೂ, ದರಗಳ ಕಡಿತವು ವಾಣಿಜ್ಯ ಅನಿಲ ಸಿಲಿಂಡರ್ ಬಳಕೆದಾರರಿಗೆ ಮಾತ್ರ. ದೇಶೀಯ ಎಲ್ಪಿಜಿ ಅನಿಲ ಗ್ರಾಹಕರಿಗೆ ಬೆಲೆಯಲ್ಲಿ ಯಾವುದೇ ಪರಿಷ್ಕರಣೆಯಾಗಿಲ್ಲ. 14.2 ಕೆಜಿ ಗ್ಯಾಸ್ ಸಿಲಿಂಡರ್ಗಳ ದರಗಳು ಕಳೆದ ತಿಂಗಳಂತೆಯೇ ಉಳಿದಿವೆ. ಕಳೆದ ತಿಂಗಳು ಕೇಂದ್ರವು ದೇಶೀಯ ಅಡುಗೆ ಅನಿಲದ ಬೆಲೆಯನ್ನು 50 ರೂ.ಗೆ ಹೆಚ್ಚಿಸಿತ್ತು. ಎಲ್ಪಿಜಿ ಬೆಲೆ, ಹೆಚ್ಚಾಗಿ ಅಂತರರಾಷ್ಟ್ರೀಯ ಕಚ್ಚಾ ಬೆಲೆಗಳ ಮೇಲೆ ಅವಲಂಬಿತವಾಗಿದೆ. ಇವುಗಳು ಹೆಚ್ಚಾದಾಗ, ಎಲ್ಪಿಜಿ ಸಿಲಿಂಡರ್ ದರಗಳು ಸಹ ಹೆಚ್ಚಾಗುತ್ತವೆ. ಬಡ…
ಕಾಸರಗೋಡು: ಬೈಕ್ ಮತ್ತು ಟ್ಯಾಂಕರ್ ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ ಚೆರ್ವತ್ತೂರು ಕೊವ್ವಲ್ನಲ್ಲಿ ನಡೆದಿದೆ. ನೀಲೇಶ್ವರ ಚಾಯೋತ್ ನ ದೀಪಕ್ (33) ಮತ್ತು ಕನ್ನಾಟಿಪಾರೆಯ ಶೋಭಿತ್ (27) ಮೃತ ಪಟ್ಟವರು. ದೀಪಕ್ ಖಾಸಗಿ ಬಸ್ಸಿನ ಚಾಲಕರಾಗಿದ್ದರು. ಶೋಭಿತ್ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಸ್ನೇಹಿತರಾಗಿದ್ದ ಇವರು ರಾತ್ರಿ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಇನ್ನು ಮೃತ ದೇಹಗಳನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಿದೆ.










