ಮಂಗಳೂರು: ಯಕ್ಷಗಾನದ ಅಪ್ರತಿಮ ಕಲಾವಿದ , ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ (90) ವಿಧಿವಶರಾಗಿದ್ದಾರೆ. ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ರ ಮಾರ್ಚ್ 20ರಲ್ಲಿ ಕೇರಳ ರಾಜ್ಯದ ಕುಂಬ್ಳೆಯಲ್ಲಿ ಸುಂದರ್ ರಾವ್ ಜನಿಸಿದರು. ಯಕ್ಷಗಾನ ಮತ್ತು ತಾಳ-ಮದ್ದಳೆ (ಸಾಂಪ್ರದಾಯಿಕ ನೃತ್ಯ) ಕಲಾವಿದರಾಗಿದ್ದ ಸುಂದರ್ ರಾವ್ ಮಂಗಳೂರಿನ ಆಗಿನ ಸುರತ್ಕಲ್ ಕ್ಷೇತ್ರದ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 1994 ರಿಂದ 1999ರ ವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಅದ್ಭುತ ವಾಕ್ ಚಾತುರ್ಯದಿಂದ ಪ್ರಸಿದ್ಧರಾಗಿದ್ದ ಕುಂಬ್ಳೆ ಸುಂದರ್ ರಾವ್ ಪ್ರಾಸಬದ್ಧ ಸಂಭಾಷಣೆಯಿಂದಲೇ ಹೆಸರುವಾಸಿಯಾಗಿದ್ದರು. ರಾವ್ 50ಕ್ಕೂ ಅಧಿಕ ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ್ದಾರೆ.ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕುಂಬ್ಳೆ ಸುಂದರ್ ರಾವ್ ಮಂಗಳೂರಿನ ಪಂಪ್ವೆಲ್ನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಸುಂದರ್ ರಾವ್ ನಿಧನಕ್ಕೆ ಯಕ್ಷಕಲಾರಂಗ ಸಂತಾಪ ವ್ಯಕ್ತಪಡಿಸಿದೆ.
Author: main-admin
ಮಂಗಳೂರು : ಮಂಗಳೂರು ನವಮಂಗಳೂರು ಬಂದರಿಗೆ ಈ ಋತುವಿನ ಮೊದಲ ಐಷರಾಮಿ ಹಡಗು ಆಗಮಿಸಿದೆ. ಮಾಲ್ಟಾದಿಂದ ಬಂದಿದ್ದ ‘ಎಂಎಸ್ ಯುರೋಪ–2’ ಹೆಸರಿನ ಹಡಗಿನಲ್ಲಿ 271 ಪ್ರಯಾಣಿಕರು ಹಾಗೂ 373 ಸಿಬ್ಬಂದಿ ಆಗಮಿಸಿದ್ದಾರೆ. ಹಡಗಿನಲ್ಲಿ ಆಗಮಿಸಿದ್ದ ಪ್ರಯಾಣಿಕರಿಗೆ ಎನ್ಎಂಪಿಎ ದಲ್ಲಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು, ಹಡಗಿನಲ್ಲಿ ಬಂದಿದ್ದ ಪ್ರವಾಸಿಗರು ಸೇಂಟ್ ಅಲೋಶಿಯಸ್ ಕಾಲೇಜು, ಕದ್ರಿ ಹಾಗೂ ಕುದ್ರೋಳಿ ದೇವಸ್ಥಾನ, ಮಂಗಳೂರಿನ ಮಾರುಕಟ್ಟೆ, ಉಡುಪಿ ಕೃಷ್ಣ ಮಠ, ಮೂಡುಬಿದಿರೆಯ ಸಾವಿರ ಕಂಬದ ಬಸದಿ ಫಿಜಾ ಮಾಲ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದರು. ಸಂಜೆ 3 ಗಂಟೆಗೆ ಹಡಗು ಇಲ್ಲಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿತು. ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಪ್ರವಾಸಿ ಹಡುಗಳ ಭೇಟಿ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ದೀರ್ಘ ಅವಧಿಯ ಬಳಿಕ, ಈ ಋತುವಿನಲ್ಲಿ ಮತ್ತೆ ವಿದೇಶಿ ಪ್ರಯಾಣಿಕರು ನಗರಕ್ಕೆ ಭೇಟಿ ನೀಡಿದ್ದಾರೆ.
ಮಂಗಳೂರು: ಗೂಂಡಾ ಕಾಯ್ದೆ, ಭಯೋತ್ಪಾದನಾ ನಿಗ್ರಹ ಮೊದಲಾದ ಕಾನೂನು ಜಾರಿಯಲ್ಲಿದ್ದರೂ, ಗೋಡೆ ಬರಹದಂತಹ ಪ್ರಕರಣಗಳು ನಡೆದಾಗ ಸರಕಾರ, ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರೆ, ಜಿಲ್ಲೆಯಲ್ಲಿ ಕುಕ್ಕರ್ ಬಾಂಬ್ ಸ್ಫೋಟದಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ. ಸರಕಾರದ ವೈಫಲ್ಯದಿಂದ ಇಂದು ಸಮಾಜದಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಆರೋಪಿಸಿದ್ದಾರೆ. ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರೋ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಒಬ್ಬ ವ್ಯಕ್ತಿಯ ಅಪರಾಧಕ್ಕೆ ಇಡೀ ಸಮುದಾಯವನ್ನು ಸಂಶಯಿಸುವ, ಅನುಮಾನದಿಂದ ನೋಡುವ ಪ್ರಕ್ರಿಯೆ ನಡೆಯುತ್ತಿರುವುದು ಖಂಡನೀಯ. ಜನತೆ ಇಂತಹ ಊಹಾಪೋಹ, ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಸೌಹಾರ್ದತೆ ಕಾಪಾಡಬೇಕು ಎಂದು ಕರೆ ನೀಡಿದರು.
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ನಿಲಾದ್ರಿ ನಗರದಲ್ಲಿ ಗುರುವಾರ ರಾತ್ರಿ ಕೇರಳ ಮೂಲದ ಯುವತಿಯ ಮೇಲೆ ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅತ್ಯಾಚಾರಕ್ಕೆ ಸಹಕರಿಸಿದ ಆತನ ಸ್ನೇಹಿತೆಯನ್ನೂ ಸೇರಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಿಟಿಎಂ ಲೇಔಟ್ನ ಸಂಸ್ಥೆಯೊಂದರಲ್ಲಿ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಗುರುವಾರ ರಾತ್ರಿ ಬಿಟಿಎಂ ಲೇಔಟ್ನಿಂದ ನಿಲಾದ್ರಿ ನಗರಕ್ಕೆ ಖಾಸಗಿ ಕಂಪನಿಯೊಂದರ ಬೈಕ್ ಬುಕ್ ಮಾಡಿದ್ದಳು. ಬೈಕ್ ಹುಡುಗ ಪಿಕ್ ಮಾಡಲು ಬಂದಾಗ ಯುವತಿ ಮದ್ಯಪಾನ ಮಾಡಿದ್ದಳು. ನಿಲಾದ್ರಿ ನಗರಕ್ಕೆ ತಲುಪುವ ಹೊತ್ತಿಗೆ ಯುವತಿ ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದಳು ಎಂದು ತಿಳಿದುಬಂದಿದೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಡ್ರಾಪ್ ಪಾಯಿಂಟ್ಗೆ ತಲುಪಿಸದೆ ಬೈಕ್ನಲ್ಲಿದ್ದ ಯುವಕ ತನ್ನ ಸ್ನೇಹಿತ ಹಾಗೂ ಸ್ನೇಹಿತೆಯ ನೆರವಿನಿಂದ ನಿಲಾದ್ರಿ ನಗರದ ತನ್ನ ರೂಮ್ಗೆ ಕರೆದೊಯ್ದು ಇಬ್ಬರು ಅತ್ಯಾಚಾರ ಮಾಡಿದ್ದಾರೆ. ಪ್ರಜ್ಞೆ ಬಂದ ಬಳಿಕ ಯುವತಿಯನ್ನು ಆರೋಪಿಗಳು ಬಿಟ್ಟು…
ಮಂಗಳೂರು: ಸುರತ್ಕಲ್ ಎನ್ ಐ ಟಿಕೆ ಬಳಿ ಸುಂಕ ಸಂಗ್ರಹ ಕೇಂದ್ರಕ್ಕೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆ ನಿರ್ದೇಶಕರ ಪತ್ರದ ಆಧಾರದಲ್ಲಿ ಡಿಸೆಂಬರ್ 1ರಿಂದ ಟೋಲ್ ಕೇಂದ್ರದಲ್ಲಿ ಸುಂಕ ಸಂಗ್ರಹ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ರವಿ ಕುಮಾರ್ ಎಂ ಆರ್ ತಿಳಿಸಿದ್ದಾರೆ. ನ.30 ರ ಮಧ್ಯರಾತ್ರಿ ಗಂಟೆಗೆ ಇದು ಜಾರಿಗೆ ಬರಲಿದ್ದು ಸಾರ್ವಜನಿಕರು ಸುರತ್ಕಲ್ ಟೋಲನ್ನು ಯಾವುದೇ ಸುಂಕ ಪಾವತಿಸದೆ ದಾಟಬಹುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.ಇನ್ನೊಂದೆಡೆ ನಿರೀಕ್ಷೆಯಂತೆ ಹೆಜಮಾಡಿಯಲ್ಲಿ ಟೋಲ್ ಮೊತ್ತ ದುಬಾರಿಯಾಗಲಿದೆ.
ಬಂಟ್ವಾಳ: ಸಿದ್ದಕಟ್ಟೆಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಗೆ ಸ್ಕೂಟರ್ ಚಲಾಯಿಸಲು ನೀಡಿದ ಆಕೆಯ ಪೋಷಕರಿಗೆ ಬಂಟ್ವಾಳ ನ್ಯಾಯಾಲಯ 26 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಕಳೆದ ಆಗಸ್ಟ್ನಲ್ಲಿ ಸಿದ್ದಕಟ್ಟೆಯಲ್ಲಿ ಸ್ಕೂಟರ್ ಮತ್ತು ಕಾರಿನ ಮಧ್ಯೆ ಢಿಕ್ಕಿ ಸಂಭವಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿದ ಎಎಸ್ಐ ವಿಜಯ್ ಅವರು ನೋಟಿಸ್ ಜಾರಿ ಮಾಡಿದ್ದರು. ಪ್ರಸ್ತುತ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಬಾಲಕಿಯ ತಾಯಿಗೆ ದಂಡ ವಿಧಿಸಿ ಆದೇಶ ನೀಡಿದೆ.
ಮಂಗಳೂರು: ನಗರದ ತೆಂಕ ಎಕ್ಕಾರು ಗ್ರಾಮದಲ್ಲಿ ಕಂಠ ಪೂರ್ತಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಪತ್ನಿಯೊಂದಿಗೆ ಜಗಳವಾಡಿ ಕೊಲೆಗೈದಿರುವ ಘಟನೆ ನಡೆದಿದೆ. ದುರ್ಗೇಶ್ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ಹೆಂಡತಿ ಸರಿತಾಳೊಂದಿಗೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಮರದ ರೀಪಿನಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದಾನೆ. ತಾಯಿಯ ಹತ್ಯೆ ಕಂಡು ಮಗ ರಾಹುಲ್ ಹೆದರಿ ತನ್ನ ಅಜ್ಜಿ ಮನೆಗೆ ಓಡಿ ಹೋಗಿದ್ದಾನೆ. ಸ್ವತಃ ಆರೋಪಿಯೇ ಇಂದು ಬೆಳಗ್ಗೆ ತನ್ನ ಅಣ್ಣ ಮಧುಗೆ ಕರೆ ಮಾಡಿ ಸರಿತಾ ಮೃತಪಟ್ಟಿರುವುದಾಗಿ ತಿಳಿಸಿದ್ದಾನೆ. ಮಧು ಸ್ಥಳಕ್ಕೆ ಬಂದು ನೋಡಿದಾಗ ದುರ್ಗೇಶನೇ ಸರಿತಾಳನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಮೇರ್ಲ ಎಂಬಲ್ಲಿ ಮಹಿಳೆ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಮೃತ ಮಹಿಳೆ ಸ್ಥಳೀಯ ನಿವಾಸಿ ರವಿ ಎಂಬವರ ಪತ್ನಿ ಬಿಂದು(48)ಎಂಬಾಕೆಯಾಗಿದ್ದಾರೆ. ಈಕೆ ನ.27ರಂದು ಮನೆಯಲ್ಲಿ ರಬ್ಬರಿಗೆ ಉಪಯೋಗಿಸುವ ಆ್ಯಸಿಡ್ ಸೇವಿಸಿದ್ದಾರೆ. ಮನೆಯವರು ಈಕೆಯನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಆಕೆ ಸೋಮವಾರ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.
ಮಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಮೊಬೈಲ್ ನಲ್ಲಿ ಮತ್ತಷ್ಟು ಸ್ಪೋಟಕ ಜಿಹಾದಿ ವಿಡಿಯೋಗಳನ್ನು ಪೊಲೀಸರು ಪತ್ತೆ ಹೆಚ್ಚಿದ್ದಾರೆ. ಮತಾಂಧ ಮನಃಸ್ಥಿತಿಯನ್ನು ಹೊಂದಿದ್ದ ಮಹಮ್ಮದ್ ಶಾರೀಕ್ನ ಮೊಬೈಲ್ನಲ್ಲಿ 1 ಸಾವಿರಕ್ಕೂ ಹೆಚ್ಚು ಜೆಹಾದಿ ವೀಡಿಯೋಗಳು ಪತ್ತೆಯಾಗಿವೆ.ಐಸಿಸ್ ಉಗ್ರರ ವಿಧ್ವಂಸಕ ಕೃತ್ಯಗಳ ವೀಡಿಯೋ ಸೇರಿದಂತೆ 55 ಜಿಬಿಗೂ ಅಧಿಕ ವೀಡಿಯೋ, ಪೊಟೋಗಳು ಆತನ ಮೊಬೈಲ್ ಮತ್ತು ಪೆನ್ಡ್ರೈವ್ನಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ. ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಬಾಂಬ್ ಸ್ಫೋಟದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಗ್ರ ಶಾರೀಕ್ನನ್ನೂ ಹತ್ಯೆಗೆ ಸಂಚಿನ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಶಾರೀಕ್ ಚಿಕಿತ್ಸೆ ಪಡೆಯುತ್ತಿರುವ ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಶಾರೀಕ್ ಕೊಠಡಿ ಪ್ರವೇಶದ ಬಳಿ ಮೆಟಲ್ ಡಿಟೆಕ್ಟರ್ ಅಳವಡಿಸಿಸಲಾಗಿದೆ.
ಸುಳ್ಯ : ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್. ಅಂಗಾರ ಅವರಿಗೆ ಡೆಂಗ್ಯೂ ಜ್ವರ ದೃಢಪಟ್ಟಿದ್ದು, ನಿನ್ನೆ ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಎರಡು ದಿನಗಳಿಂದ ಸಚಿವರಿಗೆ ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪರೀಕ್ಷೆ ನಡೆಸಿದ್ದು ಸಚಿವರಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಎರಡು ದಿನ ಸಚಿವರು ಸಾರ್ವಜನಿಕ ಸಂಪರ್ಕಕ್ಕೆ ಲಭ್ಯರಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ.










