ಬಂಟ್ವಾಳ: ಬೋಳ್ಪಾಡಿಯಲ್ಲಿ ಇತ್ತೀಚೆಗೆ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳ ಬಾಳ್ತಿಲ ನಿವಾಸಿ ಪೃಥ್ವಿ (18) ಹಾಗೂ ಮಂಗಳೂರಿನ ಸುರತ್ಕಲ್ ನಿವಾಸಿ ಕಿಶಾನ್ (22) ಎಂದು ಗುರುತಿಸಲಾಗಿದೆ.ಇವರಿಬ್ಬರು ಪರಸ್ಪರ ಪರಿಚಯಸ್ಥರು ಹಾಗೂ ಗೆಳೆಯರಾಗಿದ್ದರು. ಬಾಳ್ತಿಲ ಗ್ರಾಮದ ರೋಹಿನಿ ಅವರು ಒಬ್ಬರೇ ಮನೆಯಲ್ಲಿರುವಾಗ ಜೂ.1 ರಂದು ಮುಂಜಾನೆ ಕಳ್ಳತನ ನಡೆದಿತ್ತು. ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಸಮೀಪದ ಮನೆಯ ಹತ್ತಿರ ಸಂಬಂಧಿಯಾಗಿದ್ದ ಪೃಥ್ವಿ ಅವರ ಬಗ್ಗೆ ಅನುಮಾನಗಳು ವ್ಯಕ್ತವಾಗಿ ತನಿಖೆ ನಡೆಸಿದಾಗ ಪ್ರಕರಣ ಬಹಿರಂಗವಾಗಿದೆ. ಸಂಬಂಧಿಕರ ಮನೆಯ ಎಲ್ಲ ವಿವರ ಗೊತ್ತಿದ್ದ ಆಕೆ ಗೆಳೆಯನ ಸಹಕಾರದಿಂದ ಚಿನ್ನಾಭರಣ ದೋಚಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗಳಿಂದ 2.50 ಲಕ್ಷ ರೂ. ಮೌಲ್ಯದ 21 ಗ್ರಾಂ ಚಿನ್ನಾಭರಣ ಹಾಗೂ 600 ರೂ. ನಗದು ವಶಪಡಿಸಲಾಗಿದೆ.ಆರೋಪಿಗಳ ಪತ್ತೆ ಕಾರ್ಯದಲ್ಲಿ ಪ್ರಕರಣದ ತನಿಖಾಧಿಕಾರಿ ಎ.ಎಸ್.ಐ ನವೀನ್, ಹೆಡ್ ಕಾನ್ ಸ್ಟೇಬಲ್ ಗಳಾದ ಸುರೇಶ್ ಕುಮಾರ್, ರಾಜೇಶ್, ರಕ್ಷೀತ್, ಕಾನ್ಸ್ಟೇಬಲ್ಗಳಾದ ಬಸವರಾಜ ಕುಡಗುಂಟಿ, ನಾಗನಾಥ, ಮತ್ತು ಮಪಿಸಿ ರೇವತಿ, ಭಾಗ್ಯಮ್ಮ, ಮಾಲಾಶ್ರೀ ರವರುಗಳು ಪಾಲ್ಗೊಂಡಿದ್ದರು. ಜಿಲ್ಲಾ ಬೆರಳಚ್ಚು ಘಟಕದ ಸಚಿನ್ ಮತ್ತು ಉದಯ್ ಹಾಗೂ ಜಿಲ್ಲಾ ಗಣಕಯಂತ್ರ ವಿಭಾಗದ ದಿವಾಕರ ಮತ್ತು ಸಂಪತ್ ಅವರು ಆರೋಪಿ ಪತ್ತೆ ಕಾರ್ಯದಲ್ಲಿ ಸಹಕರಿಸಿದರು.




