ಬೆಂಗಳೂರು: ಬೆಂಗಳೂರಿನಲ್ಲಿ ರಕ್ಷಕರೇ ಭಕ್ಷಕರಾದ ಆಘಾತಕಾರಿ ಘಟನೆಯೊಂದು ನಡೆದಿದೆ. ಸಿಐಡಿ ವಿಭಾಗದ ಇನ್ಸ್ಪೆಕ್ಟರ್ ಒಬ್ಬರು ಸ್ವತಃ ತಾವೇ ಗ್ಯಾಂಗ್ ಕಟ್ಟಿಕೊಂಡು, ಮಡಿವಾಳದ ಖಾಸಗಿ ಹೋಟೆಲ್ನಲ್ಲಿ ತಂಗಿದ್ದ ಕೇರಳ ಮೂಲದ ವ್ಯಕ್ತಿಗಳನ್ನು ಬೆದರಿಸಿ ಬರೋಬ್ಬರಿ 20 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ. ಸಿಐಡಿ ಇನ್ಸ್ಪೆಕ್ಟರ್ ದರೋಡೆಯ ಮಾಸ್ಟರ್ ಮೈಂಡ್ ಆಗಿದ್ದು, ಸದ್ಯ ಪೊಲೀಸರ ಕಾರ್ಯಾಚರಣೆ ತೀವ್ರಗೊಳ್ಳುತ್ತಿದ್ದಂತೆಯೇ ಎಸ್ಕೇಪ್ ಆಗಿದ್ದಾರೆ. ಈ ಕುರಿತು ನಗರ ಪೊಲೀಸ್ ಆಯುಕ್ತ (CP) ಸಿಮಂತ್ ಕುಮಾರ್ ಅವರು ಅಧಿಕೃತ ಹೇಳಿಕೆ ನೀಡಿದ್ದು, ಪ್ರಕರಣದಲ್ಲಿ ಇನ್ಸ್ಪೆಕ್ಟರ್ ಪಾತ್ರ ಇರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಟ್ರೇಡಿಂಗ್ (ವ್ಯಾಪಾರ) ಉದ್ದೇಶಗಳಿಗಾಗಿ ಹಣ ಹಿಡಿದುಕೊಂಡು ಕೇರಳದ ಉದ್ಯಮಿಗಳು ಮಡಿವಾಳದ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದಿದ್ದ ಇನ್ಸ್ಪೆಕ್ಟರ್, ಹ್ಯಾರಿಸ್, ಕುಪೇಂದ್ರ, ಶಪಿ ಮತ್ತು ಶಾನಿ ಎಂಬ ನಾಲ್ವರೊಂದಿಗೆ ಸೇರಿ ದರೋಡೆಗೆ ಪ್ಲಾನ್ ಮಾಡಿದ್ದರು. ಯೋಜನೆಯಂತೆ ಹೋಟೆಲ್ ಮುಂಭಾಗ ಅಧಿಕೃತ ಸಿಐಡಿ ಪೊಲೀಸ್ ಜೀಪ್ ನಿಲ್ಲಿಸಿ ಇನ್ಸ್ಪೆಕ್ಟರ್ ಒಳಗೇ ಕುಳಿತಿದ್ದರು. ಅವರ ಗ್ಯಾಂಗ್ನ ಇಬ್ಬರು ಹೋಟೆಲ್ ಕೋಣೆಗೆ ನುಗ್ಗಿ, ತಾವು ಪೊಲೀಸರೆಂದು ಇನ್ಸ್ಪೆಕ್ಟರ್ ಅವರ ಅಧಿಕೃತ ಗುರುತಿನ ಚೀಟಿ (ID Card) ತೋರಿಸಿ, ‘ಅಕ್ರಮವಾಗಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಿ’ ಎಂದು ಉದ್ಯಮಿಗಳನ್ನು ತೀವ್ರವಾಗಿ ಬೆದರಿಸಿದ್ದಾರೆ. ಬಳಿಕ ಅವರಿಂದ 20 ಲಕ್ಷ ರೂಪಾಯಿ ನಗದನ್ನು ಕಸಿದುಕೊಂಡು, ಹೊರಗೆ ನಿಂತಿದ್ದ ಪೊಲೀಸ್ ಜೀಪ್ನಲ್ಲೇ ಇಡೀ ಗ್ಯಾಂಗ್ ಪರಾರಿಯಾಗಿದೆ.
ಆರಂಭದಲ್ಲಿ ಹೆದರಿದ್ದ ಕೇರಳದ ವ್ಯಕ್ತಿಗಳಿಗೆ ನಂತರದ ಬೆಳವಣಿಗೆಗಳಿಂದ ದರೋಡೆಯ ಬಗ್ಗೆ ತೀವ್ರ ಅನುಮಾನ ಮೂಡಿದೆ. ತಕ್ಷಣವೇ ಅವರು ಮಡಿವಾಳ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣದ ಗಾಂಭೀರ್ಯತೆ ಅರಿತು ತಕ್ಷಣವೇ ತನಿಖೆಗೆ ಇಳಿದ ಮಡಿವಾಳ ಪೊಲೀಸರು, ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ದರೋಡೆ ಗ್ಯಾಂಗ್ನಲ್ಲಿದ್ದ ಕುಪೇಂದ್ರ ಎಂಬಾತನನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಯ ವಿಚಾರಣೆ ನಡೆಸಿದಾಗ ಇಡೀ ದರೋಡೆ ಪ್ರಕರಣದ ಅಸಲಿ ಕಿಂಗ್ಪಿನ್ ಸಿಐಡಿ ಇನ್ಸ್ಪೆಕ್ಟರ್ ಎಂಬ ಆಘಾತಕಾರಿ ಸತ್ಯ ಬಾಯ್ಬಿಟ್ಟಿದ್ದಾನೆ.
ಕುಪೇಂದ್ರ ಅರೆಸ್ಟ್ ಆಗುತ್ತಿದ್ದಂತೆಯೇ ಇನ್ಸ್ಪೆಕ್ಟರ್ ಹಾಗೂ ಉಳಿದ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಸದ್ಯ ಪೊಲೀಸರು ಆರೋಪಿ ಕುಪೇಂದ್ರ ಮತ್ತು ದರೋಡೆಗೆ ಬಳಸಲಾಗಿದ್ದ ಸಿಐಡಿ ಜೀಪನ್ನು ಜಪ್ತಿ ಮಾಡಿದ್ದು, ತಲೆಮರೆಸಿಕೊಂಡಿರುವ ಖಾಕಿ ಅಧಿಕಾರಿ ಸೇರಿದಂತೆ ನಾಲ್ವರಿಗಾಗಿ ಬಲೆ ಬೀಸಿದ್ದಾರೆ.




