ಬೆಳ್ತಂಗಡಿ: ಕೇರೆ ಹಾವನ್ನು ತಿನ್ನಲು ಅಟ್ಟಾಡಿಸಿಕೊಂಡು ಬಂದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಏಕಾಏಕಿ ಮನೆಯೊಳಗೆ ನುಗ್ಗಿದ ಘಟನೆ ತಾಲೂಕಿನ ಕಿಲ್ಲೂರು ಎಂಬಲ್ಲಿ ನಡೆದಿದೆ.
ಕಿಲ್ಲೂರಿನ ಖಾಸಗಿ ಮನೆಯೊಂದರ ಬಳಿ ಕೇರೆ ಹಾವನ್ನು ಕಬಳಿಸಲು ಕಾಳಿಂಗ ಸರ್ಪ ಬೆನ್ನಟ್ಟಿಕೊಂಡು ಬಂದಿದೆ. ಪ್ರಾಣಭಯದಿಂದ ಕೇರೆ ಹಾವು ಮನೆಯೊಳಗೆ ನುಗ್ಗಿದ್ದು, ಅದರ ಬೆನ್ನಲ್ಲೇ ಬೃಹತ್ ಕಾಳಿಂಗ ಸರ್ಪವೂ ಮನೆ ಪ್ರವೇಶಿಸಿದೆ. ಇದನ್ನು ಕಂಡು ಆತಂಕಗೊಂಡ ಮನೆ ಮಂದಿ ತಕ್ಷಣವೇ ಸ್ಥಳೀಯ ಉರಗ ತಜ್ಞ ಬೆಳ್ತಂಗಡಿಯ ಅಶೋಕ್ ಲಾಯಿಲಾ ಅವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಲಭಿಸುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಶೋಕ್ ಲಾಯಿಲಾ ಅವರು ಸುದೀರ್ಘ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಕೈಗೆ ಸಿಕ್ಕ ಆಹಾರ (ಕೇರೆ ಹಾವು) ಕೈತಪ್ಪಿದ ಕೋಪದಲ್ಲಿ ಕಾಳಿಂಗ ಸರ್ಪ ಹಲವು ಬಾರಿ ಉರಗ ತಜ್ಞ ಅಶೋಕ್ ಅವರ ಮೇಲೆಯೇ ಬುಸುಗುಟ್ಟಿ ದಾಳಿಗೆ ಯತ್ನಿಸಿದೆ. ಕೊನೆಗೂ ಹರಸಾಹಸ ಪಟ್ಟು ಹಾವನ್ನು ಸೆರೆಹಿಡಿದ ಅಶೋಕ್ ಲಾಯಿಲಾ, ಅದನ್ನು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.




