ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇ ಒಂದರಲ್ಲಿ ಬೆಂಗಳೂರು ಮೂಲದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮತ್ತೊಂದೆಡೆ ಆಕೆಯ ಪ್ರಿಯಕರ ಎನ್ನಲಾದ ಕೇರಳ ಮೂಲದ ಯುವಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣ ತೀವ್ರ ನಿಗೂಢತೆ ಹಾಗೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಹೋಂ ಸ್ಟೇನಲ್ಲಿ ದಾರುಣ ಅಂತ್ಯ
ಬೆಂಗಳೂರು ನಿವಾಸಿಯಾದ ಸಾಯಿ ಸುರಭಿ (Sai Surabhi) ಮೃತಪಟ್ಟ ದುರ್ದೈವಿ. ಈಕೆಯೊಂದಿಗೆ ಹೋಂ ಸ್ಟೇಗೆ ಬಂದಿದ್ದ ಕೇರಳದ ಕೋಝಿಕ್ಕೋಡ್ ಮೂಲದ ಕ್ಯಾಬ್ ಚಾಲಕ ಸಂಜೀತ್ ಅಲಿ ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಶನಿವಾರದಂದು ಮುದ್ದೇನಹಳ್ಳಿ ಸಮೀಪದ ಹೋಂ ಸ್ಟೇಗೆ ಬಂದು ಇವರಿಬ್ಬರು ತಂಗಿದ್ದರು. ಸೋಮವಾರದಂದು ರೂಮ್ ಖಾಲಿ ಮಾಡುವ (ಚೆಕ್-ಔಟ್) ಸಮಯ ಕಳೆದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅನುಮಾನಗೊಂಡ ಹೋಂ ಸ್ಟೇ ಸಿಬ್ಬಂದಿ ಒಳಗೆ ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಹಾಗೂ ನಂದಿಗಿರಿಧಾಮ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಹಗ್ಗ ಕತ್ತರಿಸಿದ ಸ್ಥಿತಿ, ಮಾತ್ರೆಗಳ ಪತ್ತೆ
ಘಟನಾ ಸ್ಥಳದಲ್ಲಿ ಯುವತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತಾದರೂ, ನೇಣು ಹಾಕಿಕೊಂಡಿದ್ದ ಹಗ್ಗ ಕತ್ತರಿಸಲ್ಪಟ್ಟಿತ್ತು. ಜೊತೆಗೆ ಕೋಣೆಯಲ್ಲಿ ಕೆಲವು ಮಾತ್ರೆಗಳು ಪತ್ತೆಯಾಗಿರುವುದರಿಂದ ಇಬ್ಬರೂ ವಿಷ ಸೇವಿಸಿರುವ ಸಾಧ್ಯತೆಗಳೂ ಇವೆ ಎಂದು ಶಂಕಿಸಲಾಗಿದೆ. ಪೊಲೀಸರಿಗೆ ಕೋಣೆಯಲ್ಲಿ ಒಂದು ಡೈರಿ (Diary) ಸಿಕ್ಕಿದ್ದು, ಅದರಲ್ಲಿ ಬರೆಯಲಾದ ಒಕ್ಕಣೆಯನ್ನು ಪರಿಶೀಲಿಸಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿರುವ ಸಂಜೀತ್ ಅಲಿಗೆ ಪ್ರಜ್ಞೆ ಬಂದ ನಂತರವಷ್ಟೇ ಇದು ಕೊಲೆಯೋ ಅಥವಾ ಇಬ್ಬರೂ ಒಟ್ಟಿಗೆ ಮಾಡಿಕೊಂಡ ಆತ್ಮಹತ್ಯೆಯೋ ಎಂಬುದು ಸ್ಪಷ್ಟವಾಗಲಿದೆ ಎಂದು ಎಸ್ಪಿ ಕುಶಾಲ್ ಚೌಕ್ಸಿ ತಿಳಿಸಿದ್ದಾರೆ.
ತಾಯಿಯಿಂದ ‘ಲವ್ ಜಿಹಾದ್’ ಕೊಲೆ ಆರೋಪ
ಮಗಳ ನಿಗೂಢ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಾಯಿ ಗೀತಾ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದು, ಇದೊಂದು ವ್ಯವಸ್ಥಿತ ‘ಲವ್ ಜಿಹಾದ್ ಕೊಲೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಾಯಿ ಸುರಭಿ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಓದುತ್ತಿದ್ದಾಗ ಸಂಜೀತ್ ಅಲಿ ಪರಿಚಯವಾಗಿ, ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡಲು ಆರಂಭಿಸಿದ್ದ. ಮಗಳನ್ನು ಆತನಿಂದ ದೂರವಿಡಲು ಬೇರೆ ಕಡೆ ಓದಿಸಿದರೂ, ಆತ ಬೆನ್ನಟ್ಟಿ ಬಂದು ಕಾಟ ಕೊಡುತ್ತಿದ್ದ.
“ಅವನು ನನ್ನ ಮಗಳನ್ನು ಸಂಪೂರ್ಣವಾಗಿ ಮರಳು ಮಾಡಿ, ಡ್ರಗ್ಸ್ಗೆ ದಾಸಿಯಾಗುವಂತೆ ಮಾಡಿದ್ದ. ನಾನು ಕಷ್ಟಪಟ್ಟು ಎರಡು ಮೂರು ಕಡೆ ಚಿಕಿತ್ಸೆ ಕೊಡಿಸಿ ಆಕೆಯನ್ನು ಗುಣಮುಖಳನ್ನಾಗಿ ಮಾಡಿದ್ದೆ. ಇತ್ತೀಚೆಗೆ ಮುದ್ದೇನಹಳ್ಳಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದ ಆಕೆ, ಶನಿವಾರದಂದು ಸತ್ಸಂಗ ಇದೆ ಎಂದು ಹೇಳಿ ಹೋಗಿದ್ದಳು. ಆದರೆ ಈ ಸಂಜೀತ್ ಮತ್ತೊಮ್ಮೆ ಆಕೆಯನ್ನು ನಂಬಿಸಿ ಹೋಂ ಸ್ಟೇಗೆ ಕರೆದೊಯ್ದು ಸಂಚು ರೂಪಿಸಿ ಕೊಲೆ ಮಾಡಿದ್ದಾನೆ” ಎಂದು ತಾಯಿ ಆಕ್ರೋಶ ಹೊರಹಾಕಿದ್ದಾರೆ.
ಮುಂಚೆಯೇ ದೂರು ನೀಡಿದ್ದರೂ ಪೊಲೀಸರ ನಿರ್ಲಕ್ಷ್ಯ?
ಯುವತಿಯ ಮಾವ ಶಂಕರನಾರಾಯಣ ಅವರು ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಸಂಜೀತ್ ಅಲಿ ಕಿರುಕುಳದ ಬಗ್ಗೆ ನಾವು ಮುಂಚೆಯೇ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅಂದೇ ಆತನ ವಿರುದ್ಧ ಕ್ರಮ ಜರುಗಿಸಿದ್ದರೆ ಇಂದು ಸುರಭಿ ಬದುಕಿರುತ್ತಿದ್ದಳು” ಎಂದು ದೂರಿದ್ದಾರೆ. ಕಳೆದ ವರ್ಷವೂ ಸುರಭಿ ನಾಪತ್ತೆಯಾದಾಗ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆಗ ಪೊಲೀಸರು ಸ್ನೇಹಿತರ ಮನೆಯಲ್ಲಿದ್ದ ಆಕೆಯನ್ನು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದರು. ಪ್ರಸ್ತುತ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




