ಉಡುಪಿ: : ಮನೆಯ ಶೆಡ್ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟಿಕ್ ರಿಕ್ಷಾ ಏಕಾಏಕಿ ಹೊತ್ತಿ ಉರಿದು, ಪಕ್ಕದಲ್ಲಿದ್ದ ಕಾರು ಹಾಗೂ ಸ್ಕೂಟರ್ಗೂ ಬೆಂಕಿ ವ್ಯಾಪಿಸಿದ ಘಟನೆ ಭಾನುವಾರ ಬೆಳಗ್ಗೆ ಪೆರಂಪಳ್ಳಿ ಸಮೀಪ ನಡೆದಿದೆ. ಸಮಯಪ್ರಜ್ಞೆ ಮೆರೆದ ಇಬ್ಬರು ಯುವಕರು ತಮ್ಮ ಜೀವದ ಹಂಗನ್ನೂ ತೊರೆದು ಬೆಂಕಿಯನ್ನು ನಿಯಂತ್ರಿಸುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಭಾನುವಾರ ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ಪೆರಂಪಳ್ಳಿ ಬಳಿಯ ಮನೆಯೊಂದರ ಶೆಡ್ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟಿಕ್ ರಿಕ್ಷಾದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ತೀವ್ರಗೊಂಡಿದ್ದು, ಪಕ್ಕದಲ್ಲೇ ನಿಲ್ಲಿಸಲಾಗಿದ್ದ MG ಕಾರು ಹಾಗೂ ಸ್ಕೂಟರ್ಗೂ ಬೆಂಕಿ ವ್ಯಾಪಿಸತೊಡಗಿದೆ.
ಈ ವೇಳೆ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ಮನೆಯ ಯಜಮಾನರು ಪರಿಸ್ಥಿತಿಯನ್ನು ಕಂಡು ಆತಂಕಗೊಂಡು ಸಹಾಯಕ್ಕಾಗಿ ಬೊಬ್ಬಿಡಲಾರಂಭಿಸಿದ್ದಾರೆ. ಮನೆಯಲ್ಲಿದ್ದವರ ಸುರಕ್ಷತೆಯ ಜೊತೆಗೆ, ವಾಹನಗಳಿಂದ ಬೆಂಕಿ ಮತ್ತಷ್ಟು ವ್ಯಾಪಿಸುವ ಸಾಧ್ಯತೆಯೂ ಎದುರಾಗಿತ್ತು.
ಅದೇ ಸಂದರ್ಭದಲ್ಲಿ ಸಮೀಪದ ತಮ್ಮ ಕಟ್ಟಡ ನಿರ್ಮಾಣ ಸೈಟ್ನ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ಇಂಜಿನಿಯರ್ ಮನೋಜ್ ಅವರು ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅವರು ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲು ಮುಂದಾಗಿದ್ದಾರೆ.
ಇದೇ ವೇಳೆ ಮನೆಗೆ ಅಗತ್ಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದ ಹಿಮವರ್ಣಂ ಏಷ್ಯನ್ ಪೇಂಟ್ಸ್ನ ಯುವ ಉದ್ಯಮಿ ಶರತ್ ಅವರೂ ಬೆಂಕಿಯ ಕೆನ್ನಾಲಿಗೆಯನ್ನು ಗಮನಿಸಿ ಸ್ಥಳಕ್ಕೆ ಧಾವಿಸಿದ್ದಾರೆ. ಇಬ್ಬರೂ ಯುವಕರು ಯಾವುದೇ ವಿಳಂಬವಿಲ್ಲದೆ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.
ಜೋರಾಗಿ ಹೊತ್ತಿ ಉರಿಯುತ್ತಿದ್ದ ಬೆಂಕಿಯ ನಡುವೆಯೇ ಮೊದಲು ಬೆಂಕಿ ತಗುಲಿದ್ದ MG ಕಾರನ್ನು ಸುರಕ್ಷಿತವಾಗಿ ಹೊರತೆಗೆದು ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದ್ದಾರೆ. ಬಳಿಕ ಸ್ಥಳೀಯವಾಗಿ ಲಭ್ಯವಿದ್ದ ನೀರು, ಮಣ್ಣು ಸೇರಿದಂತೆ ವಿವಿಧ ಮಾರ್ಗಗಳನ್ನು ಬಳಸಿ ಎಲೆಕ್ಟಿಕ್ ರಿಕ್ಷಾ ಹಾಗೂ ಸ್ಕೂಟರ್ಗೆ ವ್ಯಾಪಿಸಿದ್ದ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ.
ಇದರ ಜೊತೆಗೆ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದಾರೆ.
ಇಬ್ಬರು ಯುವಕರ ಸಮಯಪ್ರಜ್ಞೆ, ಧೈರ್ಯ ಮತ್ತು ಸಾಹಸದಿಂದಾಗಿ ಬೆಂಕಿ ಮನೆಯ ಇತರ ಭಾಗಗಳಿಗೆ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ವ್ಯಾಪಿಸುವುದನ್ನು ತಡೆಯಲು ಸಾಧ್ಯವಾಗಿದೆ. ವಿಶೇಷವಾಗಿ ಮನೆಯ ಶೆಡ್ನಲ್ಲಿದ್ದ ವಾಹನಗಳಿಂದ ಬೆಂಕಿ ಮತ್ತಷ್ಟು ವ್ಯಾಪಿಸಿದ್ದರೆ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.
ತಮ್ಮ ಸುರಕ್ಷತೆಯನ್ನೂ ಲೆಕ್ಕಿಸದೆ ತಕ್ಷಣ ಕಾರ್ಯಪ್ರವೃತ್ತರಾಗಿ ಮನೆಯವರ ಜೀವ ಹಾಗೂ ಆಸ್ತಿಯನ್ನು ರಕ್ಷಿಸಲು ನೆರವಾದ ಇಂಜಿನಿಯರ್ ಮನೋಜ್ ಮತ್ತು ಯುವ ಉದ್ಯಮಿ ಶರತ್ ಅವರ ಸಮಯಪ್ರಜ್ಞೆ ಹಾಗೂ ಧೈರ್ಯವನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ.




