ಮಂಗಳೂರು: ದ.ಕ. ಜಿಲ್ಲೆಯ ಎಲ್ಲಾ ರಸ್ತೆಗಳ ಡಿವೈಡರ್ಗಳ ಮೇಲೆ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್ಗಳನ್ನು ತೆರವುಗೊಳಿಸಲು ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಸೂಚನೆ ನೀಡಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಮಳೆ ಚುರುಕುಗೊಂಡಿದ್ದು, ಮಳೆಗಾಲದ ಸಂದರ್ಭದಲ್ಲಿ ಗಾಳಿ ಮತ್ತು ಮಳೆಯ ಪರಿಣಾಮದಿಂದ ರಸ್ತೆಗಳಲ್ಲಿ ವಿಶೇಷವಾಗಿ ರಸ್ತೆಗಳ ಡಿವೈಡರ್ ಗಳಿಗೆ ಅಳವಡಿಸಲಾಗಿರುವ ಪ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್ಗಳು ಕಳಚಿ ವಾಹನಗಳ ಮೇಲೆ ಮತ್ತು ಪಾದಚಾರಿಗಳ ಮೇಲೆ ಬೀಳುವುದರಿಂದ ಅಪಘಾತಗಳು, ಜೀವಹಾನಿಗಳು ಸಂಭವಿಸುವ ಸಾಧ್ಯತೆ ಇರುತ್ತದೆ.ಮಂಗಳೂರು ಮಹಾನಗರ ಪಾಲಿಕೆ ಸಹಿತ ಜಿಲ್ಲೆಯ ಎಲ್ಲಾ ನಗರ ಸ್ಥಳೀಯಾಡಳಿತ ಸಂಸ್ಥೆ ಹಾಗೂ ಗ್ರಾಪಂ ವ್ಯಾಪ್ತಿಯ ರಸ್ತೆಯ ಡಿವೈಡರ್ಗಳ ಮೇಲೆ ಅಪಾಯಕಾರಿ ಹಾಗೂ ಅನಧಿಕೃತ ಫ್ಲೆಕ್ಸ್, ಬ್ಯಾನರ್ಗಳನ್ನು ಅಳವಡಿಸಲಾಗಿದೆ. ಇದರಿಂದ ರಸ್ತೆ ದಾಟುವವರಿಗೆ ಮತ್ತು ವಾಹನಿಗರಿಗೆ ಸಮಸ್ಯೆಯಾಗಿದೆ. ಅಪಘಾತಕ್ಕೂ ಕಾರಣವಾಗಿದೆ. ಈ ಬಗ್ಗೆ ಈಗಾಗಲೆ ಜಿಲ್ಲಾಡಳಿತಕ್ಕೆ ಸಾಕಷ್ಟು ದೂರುಗಳೂ ಬಂದಿವೆ. ರಸ್ತೆ ಸುರಕ್ಷಾ ಸಮಿತಿಯ ಸಭೆಯಲ್ಲೂ ವಿಸ್ತೃತ ಚರ್ಚೆ ನಡೆದಿದೆ. ಹಾಗಾಗಿ ತಕ್ಷಣ ಎಲ್ಲಾ ಫ್ಲೆಕ್ಸ್ ಬ್ಯಾನರ್ಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಸಿದ್ದಾರೆ.



