ಕೋಝಿಕ್ಕೋಡ್ : ಅದು ಸುಮಾರು ನಾಲ್ಕು ದಶಕಗಳ ಹಿಂದೆ ನಡೆದಿದ್ದ ನಿಗೂಢ ಕೊಲೆ ಪ್ರಕರಣ. ಯಾವುದೇ ಸಾಕ್ಷ್ಯಗಳಿಲ್ಲದೆ ಧೂಳು ಹಿಡಿದಿದ್ದ ಆ ಕೇಸ್ಗೆ ಈಗ ಸ್ವತಃ ಹಂತಕನೇ ಪೊಲೀಸರ ಮುಂದೆ ಬಂದು ಶರಣಾಗುವ ಮೂಲಕ ಬಿಗ್ ಟ್ವಿಸ್ಟ್ ಕೊಟ್ಟಿದ್ದಾನೆ. 1986 ರಲ್ಲಿ ನಡೆದ ಕೊಲೆಯೊಂದರ ಬಗ್ಗೆ 55 ವರ್ಷದ ವ್ಯಕ್ತಿಯೊಬ್ಬರು ಪಶ್ಚಾತ್ತಾಪದಿಂದ ತಪ್ಪೊಪ್ಪಿಕೊಂಡಿದ್ದು, ಸುದೀರ್ಘ ತನಿಖೆಯ ಬಳಿಕ ಬಲಿಪಶು ಕಣ್ಣೂರು ಜಿಲ್ಲೆಯ ವ್ಯಕ್ತಿ ಎಂಬುದನ್ನು ಕೇರಳ ಪೊಲೀಸರು ಪತ್ತೆ ಹಚ್ಚಿದ್ದಾರೆ.ಕೋಝಿಕ್ಕೋಡ್ ಜಿಲ್ಲೆಯ ಕೂಡರಂಜಿ ನಿವಾಸಿಯಾದ ಮೊಹಮ್ಮದಲಿ ಎಂಬಾತ ಕಳೆದ ವರ್ಷ ಪೊಲೀಸರನ್ನು ಸಂಪರ್ಕಿಸಿ, 1980 ರ ದಶಕದಲ್ಲಿ ತಾನು ಎರಡು ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದ ಹಾಗೂ ತನ್ನನ್ನು ಬಂಧಿಸುವಂತೆ ಕೇಳಿಕೊಂಡಿದ್ದ. ಆರಂಭದಲ್ಲಿ ಪೊಲೀಸರು ಇದನ್ನು ಹುಚ್ಚು ಹೇಳಿಕೆ ಎಂದು ನಂಬಲು ಹಿಂಜರಿದರಾದರೂ, ಸುಮಾರು ಒಂದು ವರ್ಷದ ಕಾಲ ನಡೆಸಿದ ವ್ಯಾಪಕ ತನಿಖೆಯ ನಂತರ ಒಂದು ಕೊಲೆ ನಡೆದಿರುವುದು ಅಧಿಕೃತವಾಗಿ ದೃಢಪಟ್ಟಿದೆ.1986 ರ ಕೊಲೆಯ ಕರಾಳ ಇತಿಹಾಸ:ಪೊಲೀಸ್ ತನಿಖೆಯ ಪ್ರಕಾರ, ಕೊಲೆಯಾದ ವ್ಯಕ್ತಿಯನ್ನು ಕಣ್ಣೂರು ಜಿಲ್ಲೆಯ ಇರಿಟ್ಟಿ ಮೂಲದ ಮೋಹನನ್ ಎಂದು ಗುರುತಿಸಲಾಗಿದೆ. ಮೊಹಮ್ಮದಲಿ ನೀಡಿದ ಹೇಳಿಕೆಯಂತೆ, 1986 ರ ನವೆಂಬರ್ನಲ್ಲಿ ಕೂಡರಂಜಿಯಲ್ಲಿ ಮೋಹನನ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ತಳ್ಳಿದಾಗ ಮೋಹನನ್ ನೀರಿಗೆ ಬಿದ್ದಿದ್ದು, ಬಳಿಕ ಮೊಹಮ್ಮದಲಿ ಆತನನ್ನು ನೀರಿನೊಳಗೆ ಬಲವಂತವಾಗಿ ಮುಳುಗಿಸಿ ಕೊಂದಿದ್ದ.ಹಳೆಯ ಪತ್ರಿಕಾ ವರದಿ ಮತ್ತು ಸೈಂಟಿಫಿಕ್ ಇನ್ವೆಸ್ಟಿಗೇಷನ್:ತಿರುವಂಬಾಡಿ ಪೊಲೀಸರು ಈ ತಪ್ಪೊಪ್ಪಿಗೆಯನ್ನು ಪರಿಶೀಲಿಸಲು 1980 ರ ದಶಕದ ಹಳೆಯ ದಾಖಲೆಗಳನ್ನು ಜಾಲಾಡಿದ್ದಾರೆ. ಡಿಸೆಂಬರ್ 1986 ರಲ್ಲಿ ಪ್ರಕಟವಾದ ಪತ್ರಿಕಾ ವರದಿಯೊಂದರಲ್ಲಿ ‘ಕೂಡರಂಜಿ ಮಿಷನ್ ಆಸ್ಪತ್ರೆಯ ಹಿಂಭಾಗದ ಹೊಲದಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ’ ಎಂದು ಉಲ್ಲೇಖಿಸಲಾಗಿತ್ತು. ಇದರ ಬೆನ್ನತ್ತಿದ ಪೊಲೀಸರು, ಮಲಬಾರ್ ಪ್ರದೇಶದಿಂದ ಕಾಣೆಯಾದವರ ಪಟ್ಟಿಯನ್ನು ಪರಿಶೀಲಿಸಿ, ವೈಜ್ಞಾನಿಕ ತನಿಖೆಯ ಮೂಲಕ ಅದು ಮೋಹನನ್ ಅವರದೇ ಶವ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ಮೋಹನನ್ ಅವರ ಕುಟುಂಬಸ್ಥರಿಗೆ ಅವರ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.ಮತ್ತೊಂದು ಕೊಲೆಯ ರಹಸ್ಯ ಬಯಲಾಗಬೇಕಿದೆ:“ಶಿಕ್ಷೆ ಅನುಭವಿಸಲು ನಾನು ಸಿದ್ಧನಿದ್ದೇನೆ. ಪ್ರಬುದ್ಧತೆಯ ಕೊರತೆಯಿದ್ದ ವಯಸ್ಸಿನಲ್ಲಿ ಮಾಡಿದ ತಪ್ಪಿನ ಗಂಭೀರತೆ ಈಗ ಅರಿವಾಗಿದೆ” ಎಂದು ಮೊಹಮ್ಮದಲಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಅಷ್ಟೇ ಅಲ್ಲದೆ, 1989 ರಲ್ಲಿ ಕೋಝಿಕ್ಕೋಡ್ನ ವೆಳ್ಳಯಿಲ್ ಬೀಚ್ನಲ್ಲಿ ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ನಡೆಸಿದ ಎರಡನೇ ಕೊಲೆಯ ಜವಾಬ್ದಾರಿಯನ್ನೂ ಆತ ಹೊತ್ತುಕೊಂಡಿದ್ದಾನೆ. ಎರಡನೇ ಬಲಿಪಶುವಿನ ಗುರುತು ಪತ್ತೆ ಹಚ್ಚಲು ಪೊಲೀಸರು ಈಗ ಹೆಚ್ಚುವರಿ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸುತ್ತಿದ್ದು, ತನಿಖೆ ಮುಂದುವರಿದಿದೆ.




