ಖೈರತಾಬಾದ್ನ ಆನಂದ್ ನಗರ ಕಾಲೋನಿಯ ‘ಭವನ ಅಪಾರ್ಟ್ಮೆಂಟ್ಸ್’ನಲ್ಲಿ ಈ ಧಾರುಣ ಘಟನೆ ನಡೆದಿದೆ. ರಾಧಾ (58) ಮೃತಪಟ್ಟ ದುರ್ದೈವಿ. ಅವರ 13 ತಿಂಗಳ ಮೊಮ್ಮಗ ಜೋಯಲ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ, ರಾಧಾ ಅವರು ತಮ್ಮ ಮೊಮ್ಮಗ ಜೋಯಲ್ನನ್ನು ಎತ್ತಿಕೊಂಡು ಅಪಾರ್ಟ್ಮೆಂಟ್ನ 5ನೇ ಮಹಡಿಯಲ್ಲಿದ್ದರು. ಕೆಳಗೆ ಹೋಗುವ ಉದ್ದೇಶದಿಂದ ಅವರು ಲಿಫ್ಟ್ ಬಟನ್ ಒತ್ತಿದ್ದಾರೆ. ಆದರೆ, ಲಿಫ್ಟ್ನ ಮುಖ್ಯ ಕ್ಯಾಬಿನ್ 5ನೇ ಮಹಡಿಗೆ ತಲುಪುವ ಮೊದಲೇ, ತಾಂತ್ರಿಕ ದೋಷದಿಂದಾಗಿ ಲಿಫ್ಟ್ನ ಹೊರಗಿನ ಬಾಗಿಲುಗಳು ತೆರೆದುಕೊಂಡಿವೆ. ಲಿಫ್ಟ್ ಬಂದಿದೆ ಎಂದೇ ಭಾವಿಸಿದ ರಾಧಾ ಅವರು ಮಗುವಿನೊಂದಿಗೆ ಮುಂದೆ ಹೆಜ್ಜೆ ಇಟ್ಟಿದ್ದಾರೆ.ಕ್ಯಾಬಿನ್ ಇಲ್ಲದೆ ಖಾಲಿ ಇದ್ದ ಲಿಫ್ಟ್ ಕಣಿವೆಯೊಳಗೆ (ಶಾಫ್ಟ್) ಬಿದ್ದ ಇಬ್ಬರೂ 5ನೇ ಮಹಡಿಯಿಂದ ನೇರವಾಗಿ ಮೊದಲ ಮಹಡಿಯ ಮೇಲ್ಭಾಗಕ್ಕೆ ಬಿದ್ದಿದ್ದಾರೆ. ತೀವ್ರ ಸ್ವರೂಪದ ಗಾಯಗಳಾಗಿದ್ದರಿಂದ ರಾಧಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆದರೆ, ಅಜ್ಜಿಯ ತೋಳಿನ ಆಸರೆಯಲ್ಲಿದ್ದ ಮಗು ಜೋಯಲ್ ಪವಾಡಸದೃಶವಾಗಿ ಬದುಕುಳಿದಿದ್ದು, ತೀವ್ರವಾಗಿ ಗಾಯಗೊಂಡಿದ್ದಾನೆ.ಘಟನೆಯನ್ನು ಗಮನಿಸಿದ ಅಪಾರ್ಟ್ಮೆಂಟ್ ನಿವಾಸಿಗಳು ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಂಬರ್ಪೇಟೆ ಅಗ್ನಿಶಾಮಕ ಮತ್ತು ರಕ್ಷಣಾ ತಂಡವು ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತಕ್ಷಣ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ಕೈಗೊಂಡಿದೆ. ಲಿಫ್ಟ್ ಶಾಫ್ಟ್ನಿಂದ ಮಗುವನ್ನು ಸುರಕ್ಷಿತವಾಗಿ ಹೊರತೆಗೆದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಫ್ಟ್ನ ಬಾಗಿಲಿನ ಲಾಕಿಂಗ್ ವ್ಯವಸ್ಥೆ ವಿಫಲವಾಗಿದೆಯೇ ಅಥವಾ ನಿರ್ವಹಣಾ ದೋಷವೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.




