ಕುಂಬಳೆ: ಗಾಳಿಯ ಅಬ್ಬರಕ್ಕೆ ತೆಂಗಿನ ಮರ ಮುರಿದು ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟು, ಇನ್ನಿಬ್ಬರು ಅಪಾಯದಿಂದ ಪಾರಾದ ಘಟನೆ ಇಂದು ಬೆಳಿಗ್ಗೆ ಕುಂಬಳೆ ಸಮೀಪದ ಪೆರುವಾಡ್ ಮೈದಾನ ಬಳಿ ನಡೆದಿದೆ. ಪೆರುವಾಡಿನ ಅಬ್ದುಲ್ಲ (65) ಮೃತಪಟ್ಟವರು.ಪೆರುವಾಡು ಜುಮಾ ಮಸೀದಿ ಸಮಿತಿ ಅಧ್ಯಕ್ಷ ರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಮೀನುಗಾರರಾಗಿದ್ದ ಇವರು ಬೆಳಿಗ್ಗೆ 8.30 ರ ಸುಮಾರಿಗೆ ಸ್ನೇಹಿತರಾದ ಇಬ್ರಾಹಿಂ ಮತ್ತು ಹಸೈನಾರ್ ಜೊತೆ ಕುಳಿತು ಮಾತನಾಡುತ್ತಿದ್ದಾಗ ಈ ದುರಂತ ನಡೆದಿದೆ. ಜೊತೆಗಿದ್ದ ಇಬ್ಬರು ಶಬ್ದ ಕೇಳಿ ಓಡಿದ್ದರಿಂದ ಅಪಾಯ ತಪ್ಪಿದೆ. ಗಂಭೀರ ಗಾಯಗೊಂಡ ಅಬ್ದುಲ್ಲ ರವರನ್ನು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ವರದಿಯಾಗಿದೆ. ಇನ್ನು ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.




