ಮಂಗಳೂರು: ನಗರದ ಕೋಡಿಯಾಲ್ನಲ್ಲಿರುವ ಜೈಲಿನೊಳಗೆ ಗಾಂಜಾ ಎಸೆದ ಆರೋಪಿಯನ್ನು ಕೆಎಸ್ಐಎಸ್ಎಫ್ ಸಿಬ್ಬಂದಿ ಬೆನ್ನಟ್ಟಿ ಹಿಡಿದ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಮೂಲತಃ ಬಂಟ್ವಾಳ ಕೊಳತ್ತಮಜಲು ಕೋಳಕೇರಿಯ ಪ್ರಸಕ್ತ ಉರ್ವದಲ್ಲಿ ವಾಸವಾಗಿರುವ ತಿಲಕ್ರಾಜ್ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.ಗುರುವಾರ ಮುಂಜಾನೆ ಸುಮಾರು 4:20ರ ವೇಳೆಗೆ ಕಾರಾಗೃಹದ ಒಳಗಿರುವ ಅಡುಗೆ ಮನೆ ಪ್ರದೇಶಕ್ಕೆ ಅನುಮಾನಾಸ್ಪದ ವಸ್ತುವನ್ನು ಅಪರಿಚಿತ ವ್ಯಕ್ತಿಯೊಬ್ಬ ಎಸೆದಿರುವುದನ್ನು ಕರ್ತವ್ಯನಿರತ ಕೆಎಸ್ಐಎಸ್ಎಫ್ ಆರ್ಪಿಸಿ ಕಿರಣ್ ಎಂಬವರು ಗಮನಿಸಿದರು.
ಹಾಗೇ ಎಎಸ್ಸೆಗೆ ಮಾಹಿತಿ ನೀಡಿ ಸುಮಾರು 500 ಮೀಟರ್ ದೂರದವರೆಗೆ ಬೆನ್ನಟ್ಟಿಕೊಂಡು ಹೋಗಿ ಆರೋಪಿಯನ್ನು ಹಿಡಿದರು. ಬಳಿಕ ಪೊಲೀಸ್ ನಿರೀಕ್ಷಕ ಸುಭಾಷ್ರಿಗೆ ಮಾಹಿತಿ ನೀಡಿದ್ದು, ಅವರು ಬಂದು ವಿಚಾರಣೆ ನಡೆಸಿದಾಗ ಆರೋಪಿ ಸತ್ಯ ಬಾಯ್ದಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.ಮೂಡುಶೆಡ್ಡೆ ನಿವಾಸಿಯೊಬ್ಬ ಗಾಂಜಾ, ಲೈಟರ್, ಗಾಂಜಾ ಸೇದುವ ಪೇಪರ್ಗಳನ್ನು ಕೊಟ್ಟು ಈ ವಸ್ತುಗಳನ್ನು ಕಾರಾಗೃಹದ ಒಳಗೆ ಎಸೆಯಬೇಕು ಎಂದು ಹೇಳಿ ಈ ಕೃತ್ಯ ಎಸಗಲು 2 ಸಾವಿರ ರೂ.ನೀಡಿರುತ್ತಾನೆ. ಅಲ್ಲದೆ ಕಾರಾಗೃಹದಲ್ಲಿ ಬಂಧಿಯಾಗಿರುವ ಲಾಯ್ ವೇಗಸ್ ಎಂಬಾತನ ಮೊಬೈಲ್ ನಂಬರ್ ನೀಡಿದ್ದು, ಆತನ ಸೂಚನೆಯಂತೆ ಆತ ಹೇಳಿದ ಜಾಗಕ್ಕೆ (ಕಾರಾಗೃಹ ಅಡುಗೆ ಮನೆ) ಗಾಂಜಾ ಎಸೆದಿರುವುದಾಗಿ ಆರೋಪಿ ತಿಲಕರಾಜ್ ವಿಚಾರಣೆಯ ವೇಳೆ ಬರ್ಕೆ ಪೊಲೀಸರಿಗೆ ತಿಳಿಸಿದ್ದಾನೆ.ಈ ಪ್ರಕರಣದಲ್ಲಿ ಆರೋಪಿಗಳಾದ ತಿಲಕ್ರಾಜ್ ಮತ್ತು ಲಾಯ್ ವೇಗಸ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಮತ್ತು ಕರ್ನಾಟಕ ಕಾರಾಗೃಹಗಳ ತಿದ್ದುಪಡಿ-2022 ಕಾಯಿದೆ 42ರಡಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಗೆ ಕಾರಾಗೃಹ ಅಧೀಕ್ಷಕ ಶರಣ ಬಸಪ್ಪ ಕೆಎಸ್ಐಎಸ್ಎಫ್ ಪೊಲೀಸ್ ನಿರೀಕ್ಷಕ ಸುಭಾಷ್ ಎಚ್.ಎನ್. ಹಾಗೂ ಕಾರಗೃಹ ಸಿಬ್ಬಂದಿ ಸಹಕರಿಸಿದ್ದಾರೆ.




