ಮಂಗಳೂರು : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಅಪರಾಧಿ ಗದಗ ತಾಲೂಕಿನ ಹೊಳೆಮುನ್ನೂರು ನಿವಾಸಿ ಮಹೇಶ ಮಾದರ (20) ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ ಸಿ-2 (ಪೊಕ್ಸೊ) ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಗರ ಹೊರವಲಯದಲ್ಲಿ ಬಾಡಿಗೆ ಮನೆಯಲ್ಲಿ ತಂದೆ ತಾಯಿಯೊಂದಿಗೆ ವಾಸವಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಹೋಮ್ ನರ್ಸ್ ಕೆಲಸ ಮಾಡಿಕೊಂಡಿದ್ದಳು. ಆರೋಪಿ ಮಹೇಶ ಮಾದರ ಕೂಡ ಪಕ್ಕದ ಮನೆಯಲ್ಲಿ ವಾಸವಾಗಿದ್ದ. ಇವರ ಮಧ್ಯೆ ಪರಿಚಯವಾಗಿ ಸ್ನೇಹ ಬೆಳೆದಿತ್ತು. 2015ರ ಮೇ 19ರಂದು ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕರೆ ಮಾಡಿದ್ದ ಆರೋಪಿ ಮಹೇಶ ಬಲ್ಲಾಳ್ಬಾಗ್ಗೆ ಕರೆಸಿ ಅಲ್ಲಿಂದ ಆಟೋದಲ್ಲಿ ಕಾವೂರು ಬಳಿಯ ಶೆಡ್ಗೆ ಕರೆದುಕೊಂಡು ಹೋಗಿ ಅಂದು ರಾತ್ರಿ ಆಕೆಯ ಲೈಂಗಿಕ ದೌರ್ಜನ್ಯ ಎಸಗಿದ್ದ. ಮರುದಿನ ಬೆಳಗ್ಗೆ 11ಕ್ಕೆ ಸರ್ಕಾರಿ ಬಸ್ಸಿನಲ್ಲಿ ಬಳ್ಳಾರಿಗೆ ಕರೆದುಕೊಂಡು ಹೋಗಿದ್ದ. ಅಲ್ಲೂ ಲೈಂಗಿಕ ದೌರ್ಜನ್ಯ ಎಸಗಿದ್ದ.
ಬಾಲಕಿ ಕೆಲಸ ಮಾಡುತ್ತಿದ್ದ ಸಂಸ್ಥೆಯವರು ನೀಡಿದ ದೂರಿನಂತೆ ಪಾಂಡೇಶ್ವರ ಪೊಲೀಸರು ಇಬ್ಬರನ್ನು ಪತ್ತೆಹಚ್ಚಿದ್ದರು. ಆರೋಪಿ ವಿರುದ್ಧ ಬಿಎನ್ಎಸ್ ಕಲಂ 137(2), , 65(1) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣ ಅಧಿನಿಯಮ ಮತ್ತು ನಿಯಮ 2012 (ಪೊಕ್ಸೊ) ಕಲಂ 52 ಮತ್ತಯ 6ರಡಿ ಶಿಕ್ಷಾರ್ಹ ಅಪರಾಧ ಎಸಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು.
ಆಗಿನ ಎಸ್ಸೈ ರೇಖಾ ಆರ್. ತನಿಖೆ ಪೂರ್ಣಗೊಳಿಸಿದ್ದರೆ ಇನ್ಸ್ಪೆಕ್ಟರ್ ಗುರುರಾಜ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ -2 (ಪೋಕ್ಸೋ) ನ್ಯಾಯಾಲದ ನ್ಯಾಯಾಧೀಶ ಮಾನು ಕೆ.ಎಸ್. ಆರೋಪಿಯ ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಪೊಕ್ಸೊ ಕಲಂ 6 ಮತ್ತು ಬಿಎನ್ಎಸ್ ಕಲಂ 65 (1) ರಡಿ 20 ವರ್ಷ ಕಠಿಣ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿದ್ದಾರೆ. ತಪ್ಪಿದಲ್ಲಿ 3 ತಿಂಗಳ ಸಾದಾ ಸಜೆ ಅನುಭವಿಸಲು ಆದೇಶಿಸಿದ್ದಾರೆ. ಆಕೆಯ ಅಪಹರಣ ಮಾಡಿರುವ ಬಗ್ಗೆ ಬಿಎನ್ಎಸ್ ಕಲಂ 137(2)ರಡಿ 3 ವರ್ಷ ಶಿಕ್ಷೆ, 5 ಸಾವಿರ ರೂ.ದಂಡ, ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ಅನುಭವಿಸಲು ತಿಳಿಸಿದ್ದಾರೆ. ದಂಡ ಮೊತ್ತ 35 ಸಾವಿರ ರೂ.ವನ್ನು ಸಂತ್ರಸ್ತೆಗೆ ನೀಡಬೇಕು. ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರವಾಗಿ 3.65 ಲಕ್ಷ ರೂ. ಸಂತ್ರಸ್ತೆಗೆ ಪಾವತಿಸಬೇಕು ಎಂದು ನಿರ್ದೇಶಿಸಿದ್ದಾರೆ.




