ಪಂಜಾಬ್: ಕಳೆದ 6 ದಿನಗಳ ಹಿಂದೆ ನಾಪತ್ತೆಯಾಗಿದ್ದ ಪಂಜಾಬಿ ಗಾಯಕಿ ಇಂದರ್ ಕೌರ್ (29) ಅವರು ಪಂಜಾಬ್ನ ಲೂಧಿಯಾನದ ಕಾಲುವೆಯೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಇಂದರ್ ಕೌರ್ ಅವರನ್ನು ಗನ್ ತೋರಿಸಿ ಅಪಹರಣ ಮಾಡಲಾಗಿತ್ತು. ಮಂಗಳವಾರ ಮುಂಜಾನೆ ಸ್ಥಳೀಯ ಪೊಲೀಸರು ನೀಲೋ ಕಾಲುವೆಯಿಂದ ಗಾಯಕಿಯ ಶವವನ್ನು ಹೊರತೆಗೆದಿದ್ದಾರೆ. ಸುಖ್ವಿಂದರ್ ಸಿಂಗ್ ಎಂಬಾತ ಇಂದರ್ ಕೌರ್ ಅವರನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದೀಗ ಆತನ ಮೇಲೆಯೇ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.ಮೇ 13ರಂದು ರಾತ್ರಿ ಸುಮಾರು ೮.೩೦ಕ್ಕೆ ಇಂದರ್ ಕೌರ್ ಅವರು ತಮ್ಮ ಫೋರ್ಡ್ ಫಿಗೊ ಕಾರಿನಲ್ಲಿ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಮನೆಯಿಂದ ಹೊರಟಿದ್ದರು. ಆದರೆ ಅವರು ಮತ್ತೆ ಮನೆಗೆ ಮರಳಲೇ ಇಲ್ಲ. ಗಾಯಕಿ ನಾಪತ್ತೆಯಾದ ಬಳಿಕ ಆಕೆಯ ಸಹೋದರ ಜೋತಿಂದರ್ ಸಿಂಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಇಂದರ್ ಕೌರ್ ಮತ್ತು ಆರೋಪಿ ಸುಖ್ವಿಂದರ್ ಸಿಂಗ್ ಮೂರು ವರ್ಷಗಳ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಸ್ನೇಹಿತರಾಗಿದ್ದರು. ಆದರೆ, ಸುಖ್ವಿಂದರ್ನಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ ಎಂಬ ಸತ್ಯ ತಿಳಿದ ತಕ್ಷಣ ಇಂದರ್ ಆತನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದರು. ಅಲ್ಲದೆ ಆತನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಇದರಿಂದ ಕೋಪಗೊಂಡ ಆರೋಪಿ ಸುಖ್ವಿಂದರ್, ಗಾಯಕಿಯ ಮೇಲೆ ತೀವ್ರ ದ್ವೇಷ ಸಾಧಿಸುತ್ತಿದ್ದ ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.ಈ ಕೊಲೆ ಪ್ರಕರಣದ ಹಿಂದೆ ದೊಡ್ಡ ಸಂಚು ಅಡಗಿರುವುದಾಗಿ ಶಂಕೆ ವ್ಯಕ್ತಪಡಿಸಿದ ಪೊಲೀಸರು, ಆರೋಪಿ ಸುಖ್ವಿಂದರ್ ಸಿಂಗ್ ಗಾಯಕಿಯನ್ನು ಕೊಲ್ಲಲೆಂದೇ ಕೆನಡಾದಿಂದ ನೇಪಾಳ ಮಾರ್ಗವಾಗಿ ಪಂಜಾಬ್ಗೆ ಬಂದಿದ್ದ. ಮೇ 13ರಂದು ಆತ ತನ್ನ ಸಹಚರರೊಂದಿಗೆ ಸೇರಿ ಗಾಯಕಿಯ ಕಾರನ್ನು ಅಡ್ಡಗಟ್ಟಿ, ಗನ್ ಪಾಯಿಂಟ್ನಲ್ಲಿ ಅಪಹರಿಸಿದ್ದನು. ನಂತರ ಅವರನ್ನು ಭೀಕರವಾಗಿ ಕೊಲೆ ಮಾಡಿ, ಶವವನ್ನು ನೀಲೋ ಕಾಲುವೆಗೆ ಎಸೆದಿದ್ದನು. ಕೃತ್ಯ ಎಸಗಿದ ತಕ್ಷಣವೇ ಆರೋಪಿ ಮತ್ತೆ ಅದೇ ನೇಪಾಳ ಮಾರ್ಗವಾಗಿ ಕೆನಡಾಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.




