ನವದೆಹಲಿ: ಪಂಜಾಬ್ ರಾಜ್ಯದ ‘ಡಿಯರ್ ಬೈಸಾಖಿ ಬಂಪರ್’ ಲಾಟರಿಯಲ್ಲಿ ಬರೋಬ್ಬರಿ 6 ಕೋಟಿ ರೂಪಾಯಿಗಳ ಪ್ರಥಮ ಬಹುಮಾನ ದೆಹಲಿಯ 80 ವರ್ಷದ ನಿವೃತ್ತ ಪೋಸ್ಟ್ ಮಾಸ್ಟರ್ ಓಂ ಪ್ರಕಾಶ್ ಗೆದ್ದಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ದೆಹಲಿಯ ಪಶ್ಚಿಮ ವಿಹಾರ್ ನಿವಾಸಿಯಾದ ಓಂ ಪ್ರಕಾಶ್ ಅವರು ಇತ್ತೀಚೆಗೆ ಪಂಜಾಬ್ನ ಲುಧಿಯಾನದಲ್ಲಿರುವ ತಮ್ಮ ಅತ್ತಿಗೆಯ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಏಪ್ರಿಲ್ 1ರಂದು ಲುಧಿಯಾನದ ಘಂಟಾ ಘರ್ ಬಳಿಯಿರುವ ಪ್ರಸಿದ್ಧ ‘ಗಾಂಧಿ ಬ್ರದರ್ಸ್ ಲಾಟರಿ ಏಜೆನ್ಸಿ’ಯಿಂದ 500 ರೂಪಾಯಿ ನೀಡಿ ಲಾಟರಿ ಟಿಕೆಟ್ ಖರೀದಿಸಿದ್ದರು. ಏಪ್ರಿಲ್ 19ರಂದು ಪಂಜಾಬ್ ರಾಜ್ಯ ಲಾಟರಿ ನಿರ್ದೇಶನಾಲಯವು ನಡೆಸಿದ ಅಧಿಕೃತ ಲಕ್ಕಿ ಡ್ರಾದಲ್ಲಿ ಅವರು ಹೊಂದಿದ್ದ ಬಿ 520729 (B 520729) ಸಂಖ್ಯೆಯ ಟಿಕೆಟ್ಗೆ ಬಂಪರ್ ಬಹುಮಾನ ಲಭಿಸಿರುವುದು ಅಧಿಕೃತವಾಗಿ ದೃಢಪಟ್ಟಿದೆ.
ಓಂ ಪ್ರಕಾಶ್ ಅವರು ಕಳೆದ 30 ವರ್ಷಗಳಿಂದ ನಿರಂತರವಾಗಿ ಲಾಟರಿ ಟಿಕೆಟ್ಗಳನ್ನು ಖರೀದಿಸುತ್ತಾ ಬಂದಿದ್ದರು. ಲುಧಿಯಾನಕ್ಕೆ ಹೋದಾಗಲೆಲ್ಲಾ ತಪ್ಪದೇ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದ ಅವರು, ಈ ಬಾರಿ ಮೊಬೈಲ್ ಅಪ್ಲಿಕೇಶನ್ ಮೂಲಕ ಫಲಿತಾಂಶ ಪರಿಶೀಲಿಸಿದಾಗ ಮೊದಲು ನಂಬಲಾಗದೆ ಆಶ್ಚರ್ಯಚಕಿತರಾಗಿದ್ದಾರೆ. ನಂತರ ಕುಟುಂಬ ಸದಸ್ಯರೊಂದಿಗೆ ಸೇರಿ ಗೆಲುವನ್ನು ಖಚಿತಪಡಿಸಿಕೊಂಡಿದ್ದಾರೆ.
ಕೈಗೆ ಬೃಹತ್ ಮೊತ್ತದ ಹಣ ಬಂದಿದ್ದರೂ ಓಂ ಪ್ರಕಾಶ್ ಮತ್ತು ಅವರ ಕುಟುಂಬದವರು ಸರಳತೆ ಮೆರೆದಿದ್ದಾರೆ. ಓಂ ಪ್ರಕಾಶ್ ಅವರ ಪುತ್ರ ಮನೋಜ್ ಮಾಧ್ಯಮಗಳೊಂದಿಗೆ ಮಾತನಾಡಿ, “ನಮ್ಮ ತಂದೆಗೆ ಸರ್ಕಾರದಿಂದ ಪೆನ್ಷನ್ ಬರುತ್ತಿದೆ, ನಮಗೆ ಹಣದ ಮೇಲೆ ದೊಡ್ಡ ವ್ಯಾಮೋಹವಿಲ್ಲ” ಎಂದಿದ್ದಾರೆ. ಈ ಹಣದ ಬಹುಭಾಗವನ್ನು ಸಮಾಜದ ಹಿತದೃಷ್ಟಿಯಿಂದ ಲುಧಿಯಾನದ ಅನಾಥಾಶ್ರಮಗಳಿಗೆ ಹಾಗೂ ನಿರ್ಗತಿಕರ ಸೇವೆಗಾಗಿ ಬಳಸಲು ಕುಟುಂಬ ನಿರ್ಧರಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.




