ಅಹಮದಾಬಾದ್ : ಹೆಸರಾಂತ ಆಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ 1.66 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಕಳ್ಳತನದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಹರ್ಷಿದಾ ಶೆಟ್ಟಿ ಎಂಬಾಕೆ ಕಳ್ಳತನ ಮಾಡಿದ ಆರೋಪಿ. ಈಕೆ ಕಳೆದ 11 ತಿಂಗಳಿನಿಂದ ದರ್ಶನ್ ಭಾಯ್ ಎಂಬುವವರಿಗೆ ಸೇರಿದ ಆಭರಣದ ಶೋ ರೂಂನಲ್ಲಿ ಸೇಲ್ಸ್ ವುಮೆನ್ ಆಗಿ ಕೆಲಸ ಮಾಡುತ್ತಿದ್ದಳು. ಕಳ್ಳತನ ಮಾಡಿದ ಬಳಿಕ “ತುರ್ತು ಕೆಲಸಕ್ಕಾಗಿ ಮಾಲೀಕರೇ ನನಗೆ ರಜೆ ನೀಡಿದ್ದಾರೆ” ಎಂದು ಸಹೋದ್ಯೋಗಿಗಳಿಗೆ ಸುಳ್ಳು ಹೇಳಿ ಆಕೆ ಹೊರನಡೆದಿದ್ದಳು.
ಸಂಜೆ ಗ್ರಾಹಕರಿಗೆ ಆಭರಣ ತೋರಿಸುವಾಗ ಚಿನ್ನದ ಬಳೆಯೊಂದು ನಾಪತ್ತೆಯಾಗಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ತಕ್ಷಣ ಮಾಲೀಕರಿಗೆ ವಿಷಯ ಮುಟ್ಟಿಸಿದಾಗ, ತಾವು ಹರ್ಷಿದಾಗೆ ರಜೆ ನೀಡಿಲ್ಲ ಎಂಬ ಸತ್ಯ ಹೊರಬಂದಿದೆ. ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಹರ್ಷಿದಾ ಕಪಾಟಿನಿಂದ ಚಿನ್ನಾಭರಣಗಳನ್ನು ತೆಗೆದು ತನ್ನ ಸಮವಸ್ತ್ರ ಮತ್ತು ಬ್ಯಾಗ್ನಲ್ಲಿ ಬಚ್ಚಿಟ್ಟುಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿದೆ.
ಸ್ಟಾಕ್ ಪರಿಶೀಲನೆ ನಡೆಸಿದಾಗ ಸುಮಾರು ₹1.66 ಕೋಟಿ ಮೌಲ್ಯದ ಚಿನ್ನದ ಸರಗಳು, ಉಂಗುರಗಳು, ಮಂಗಳಸೂತ್ರ, ಪೆಂಡೆಂಟ್ ಮತ್ತು ದುಬಾರಿ ಕೈಗಡಿಯಾರಗಳು ಕಾಣೆಯಾಗಿರುವುದು ದೃಢಪಟ್ಟಿದೆ. ಆರೋಪಿಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.




