ಕೊಲ್ಲಂ : ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದು ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಮೂವರು ಸ್ಥಳೀಯರು ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಡುವತ್ತೂರಿನ ನೀಲೇಶ್ವರಂನ ಮುಕ್ಕೋಣಿಮುಕ್ಕು ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಬೆಳಿಗ್ಗೆ ಸುಮಾರು 7.15 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಲಾರಿಯಲ್ಲಿದ್ದ ಭಾರಿ ಪ್ರಮಾಣದ ಮರಳು ಬಸ್ ನಿಲ್ದಾಣದ ಮೇಲೆ ಉರುಳಿ ಬಿದ್ದಿದ್ದರಿಂದ, ಬಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರು ಮರಳಿನ ರಾಶಿಯ ಅಡಿಯಲ್ಲಿ ಸಿಲುಕಿಕೊಂಡಿದ್ದರು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.
ಅಪಘಾತದಲ್ಲಿ ಇಬ್ಬರು ಹಿರಿಯ ನಾಗರಿಕರು ಮತ್ತು ಒಂದು ಮಗು ಸಾವನ್ನಪ್ಪಿದ್ದಾರೆ. ಮೃತ ಮೂವರನ್ನು ಹರಿಲಾಲ್ (52), ಪಾರ್ಥಿಪ್ (15) ಮತ್ತು ಅಜಯ ಕುಮಾರ್ (45) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಕೊಟ್ಟಾರಕ್ಕರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಗಾಯಗಳು ಗಂಭೀರವಾಗಿಲ್ಲ.
ಕೊಟ್ಟಾರಕ್ಕರ ಅಗ್ನಿಶಾಮಕ ದಳದ ಅಧಿಕಾರಿಗಳ ಮಾಹಿತಿ ಪ್ರಕಾರ, ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿಯು ಮುಕ್ಕೋಣಿಮುಕ್ಕು ಜಂಕ್ಷನ್ನಲ್ಲಿ ಬೈಕೊಂದನ್ನು ಹಿಂದಿಕ್ಕಲು (Overtake) ಯತ್ನಿಸಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ, ರಸ್ತೆ ಬದಿಯ ನಿವಾಸಿಯೊಬ್ಬರ ಮನೆಯ ಗೋಡೆಗೆ ಹೊಂದಿಕೊಂಡಿದ್ದ ಬಸ್ ನಿಲ್ದಾಣಕ್ಕೆ ನೇರವಾಗಿ ನುಗ್ಗಿದೆ. ಡಿಕ್ಕಿಯ ರಭಸಕ್ಕೆ ಲಾರಿಯಲ್ಲಿದ್ದ ಮರಳು ಇಡೀ ನಿಲ್ದಾಣದ ಮೇಲೆ ಸುರಿದಿದೆ. ಅಪಘಾತಕ್ಕೆ ಕಾರಣವಾದ ಬೈಕ್ ಸವಾರ ಪ್ರಸ್ತುತ ನಾಪತ್ತೆಯಾಗಿದ್ದು, ಪೊಲೀಸರು ಆತನ ಪತ್ತೆಗಾಗಿ ಜಾಲ ಬೀಸಿದ್ದಾರೆ.
“ಮುಕ್ಕೋಣಿಮುಕ್ಕು ಪ್ರದೇಶದಲ್ಲಿ ಮುಂಜಾನೆ ಶಾಲೆ, ಕಾಲೇಜು ಹಾಗೂ ಟ್ಯೂಷನ್ಗೆ ಹೋಗುವ ವಿದ್ಯಾರ್ಥಿಗಳ ಸಂಚಾರ ಹೆಚ್ಚಿರುತ್ತದೆ. ಅಪಘಾತದ ಸಮಯದಲ್ಲಿ ಒಂಬತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 12 ಜನರು ನಿಲ್ದಾಣದಲ್ಲಿದ್ದರು. ಸಾಮಾನ್ಯವಾಗಿ ಬರುವ ಖಾಸಗಿ ಬಸ್ ಕೆಲವು ನಿಮಿಷ ತಡವಾಗಿದ್ದೇ ಈ ದುರಂತಕ್ಕೆ ಕಾರಣವಾಯಿತು. ಲಾರಿ ನಿಯಂತ್ರಣ ತಪ್ಪಿ ಮರಳು ಬೀಳುವುದನ್ನು ಗಮನಿಸಿದ ಕೆಲವು ಶಾಲಾ ಮಕ್ಕಳು ತಕ್ಷಣವೇ ಅಲ್ಲಿಂದ ಓಡಿಹೋಗಿ ಅಪಾಯದಿಂದ ಪಾರಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣ ಆಗಮಿಸಿದ ಅಗ್ನಿಶಾಮಕ ದಳದ ಘಟಕಗಳು ಪೊಲೀಸರು ಮತ್ತು ಸ್ಥಳೀಯರ ನೆರವಿನೊಂದಿಗೆ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ಮರಳಿನ ಅಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಮರಳಿನಡಿ ಸಿಲುಕಿದ್ದವರ ಪೈಕಿ ಇಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಜಿಲ್ಲಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿ, “ಗಾಯಗೊಂಡವರನ್ನು ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆ, ಖಾಸಗಿ ಆಸ್ಪತ್ರೆ ಮತ್ತು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ” ಎಂದು ತಿಳಿಸಿದ್ದಾರೆ. ಅಪಘಾತದ ತೀವ್ರತೆಗೆ ರಸ್ತೆ ಬದಿಯಲ್ಲಿದ್ದ ಅಂಗಡಿಯ ಗೋಡೆ ಮತ್ತು ವಿದ್ಯುತ್ ಕಂಬ ಧರಾಶಾಹಿಯಾಗಿದೆ.




