ಪುತ್ತೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವಳಾಲು ನೀರಕಟ್ಟೆ ಎಂಬಲ್ಲಿ ಲಾರಿ ಮತ್ತು ಸ್ಕೂಟಿ ನಡುವೆ ನಡೆದ ಅಪಘಾತದಲ್ಲಿ ಸ್ಕೂಟಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರೆ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ(ಏ.29) ನಡೆದಿದೆ.
ಪೆರಿಯಡ್ಕ ಸಮೀಪದ ಬೊಳ್ಳಾವು ನಿವಾಸಿ ಶಿವಣ್ಣ ಸಪಲ್ಯ ಎಂಬವರ ಪುತ್ರ ಕಾರ್ತಿಕ್(19) ಅಪಘಾತದಲ್ಲಿ ಮೃತಪಟ್ಟ ಯುವಕ. ಈತ ಉಪ್ಪಿನಂಗಡಿ ಪದವಿ ಮಹಾವಿದ್ಯಾಲಯದ ಅಂತಿಮ ಬಿಎ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದನು ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ಯುವತಿ ಹಿರೆಬಂಡಾಡಿ ಗ್ರಾಮದ ಎಲಿಯ ನಿವಾಸಿಯಾಗಿರುವ ಅಧ್ಯಾಪಕಿಯೊಬ್ಬರ ಮಗಳು ಎಂದು ತಿಳಿದುಬಂದಿದೆ. ಚತುಷ್ಪಥ ರಸ್ತೆಯಾಗಿರುವ ನೀರಕಟ್ಟೆ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆಗೆ ಸ್ಕೂಟಿ ಸವಾರನ ಅತೀ ವೇಗದ ಚಾಲನೆ ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ.
ಲಾರಿಗೆ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಕಾರ್ತಿಕ್ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿ ವರದಿ ಮೂಲಕ ತಿಳಿದುಬಂದಿದೆ.




