ಬೆಂಗಳೂರು;ಮೂರುವರೆ ವರ್ಷದ ಮಗುವಿನ ಕುತ್ತಿಗೆಗೆ ಶಾಲ್ ಬಿಗಿದು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನ ಆರ್ ಆರ್ ನಗರದಲ್ಲಿ ನಡೆದಿದೆ. ಮಗು ರಿಯಾಳನ್ನು ಕೊಂದ ತಾಯಿ ದೀಪಾ (31) ನೇಣು ಬಿಗಿದುಕೊಂಡಿದ್ದಾರೆ. ಸ್ಥಳದಲ್ಲಿ ಡೆತ್ ನೋಟು ಸಿಕ್ಕಿದ್ದು, ನನ್ನ ಸಾವಿಗೆ ಯಾರೂ ಕಾರಣರಲ್ಲ ಸಾರಿ ಅಮ್ಮ ಎಂದು ಬರೆದಿರುವುದು ಪತ್ತೆಯಾಗಿದೆ. ಮೂಲತಃ ಬ್ರಹ್ಮಾವರದ ದೀಪಾ ಅವರು RR ನಗರದ ಅಪಾರ್ಟೆಂಟ್ ನಲ್ಲಿ ಪತಿ ಜೊತೆ ವಾಸವಾಗಿದ್ದರು. ಕಳೆದ ಒಂದು ವಾರದಿಂದ ಜ್ವರ ಮತ್ತು ಹೊಟ್ಟೆ ನೋವಿನಿಂದ ದೀಪಾ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಜ್ವರ ಮತ್ತು ಹೊಟ್ಟೆ ನೋವು ಹಿನ್ನೆಲೆ ಚಿಕಿತ್ಸೆ ಕೂಡಾ ಪಡೆಯುತ್ತಿದ್ದರು. ಆದರೆ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಮಗುವಿನ ಕುತ್ತಿಗೆಗೆ ವೇಲ್ ಬಿಗಿದು ನೇಣು ಹಾಕಿ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Author: main-admin
ಬ್ರಹ್ಮಾವರ: ಮನೆಯೊಂದಕ್ಕೆ ನುಗ್ಗಿದ ಕಳ್ಳರು 90,000 ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿರುವ ಘಟನೆ ತಾಲೂಕಿನ ಹೇರಾಡಿಯಲ್ಲಿ ನಡೆದಿದೆ. ಸಹಕಾರಿ ಸಂಘವೊಂದರಲ್ಲಿ ಕ್ಲರ್ಕ್ ಆಗಿ ಉದ್ಯೋಗ ಮಾಡಿಕೊಂಡಿರುವ, ಹೇರಾಡಿ ಗ್ರಾಮದ ಬಾರ್ಕೂರಿನ ಸಂಗೀತಾ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ನಿನ್ನೆ ಬೆಳಿಗ್ಗೆ ಸಂಗೀತಾ ಅವರು ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದರು. ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಮನೆಯ ಬಾಗಿಲಿನ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಕಬ್ಬಿಣದ ಟ್ರಂಕ್ ನ ಬೀಗ ಒಡೆದು ಅದರ ಒಳಗೆ ಇದ್ದ ಅಂದಾಜು 90,000 ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ: ಕೆಂಪು ಮಳೆ ಬಿದ್ದಿರುವ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಎಂಬಲ್ಲಿ ನಡೆದಿದೆ. ಶಿರ್ಲಾಲು ನಿವಾಸಿ ಸೂರ್ಯನಾರಾಯಣ ಭಟ್ ಅವರ ಮನೆಯಲ್ಲಿ ಬಕೆಟ್, ಡ್ರಮ್ ಗಳಲ್ಲಿ ಕೆಂಪು ನೀರು ತುಂಬಿಕೊಂಡಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಈ ನೀರನ್ನು ಪರೀಕ್ಷೆ ನಡೆಸಲು ಕಳುಹಿಸಲಾಗಿದೆ. ಪರಿಸರದಲ್ಲಿ ಒಂದೇ ಮನೆ ಇದ್ದು, ಒಂದು ಕಿ.ಮೀ.ದೂರದಲ್ಲಿ ಇರುವ ಶಿರ್ಲಾಲು ಪೇಟೆಯಲ್ಲಿ ಇಟ್ಟಿರುವ ಬಕೆಟ್ನಲ್ಲಿ ಕೆಂಪು ನೀರು ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಇದೀಗ ಅಳದಂಗಡಿ ಪರಿಸರದ ವಿವಿಧೆಡೆಗಳಲ್ಲಿಯೂ ಕೆಂಪು ಮಳೆ ಬಂದಿರುವುದಾಗಿ ತಿಳಿದು ಬಂದಿದೆ. ಇದಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.
ಕುಂದಾಪುರ: ಸಪ್ಲಿಮೆಂಟರಿ ಪರೀಕ್ಷೆ ಬರೆದ ವಿದ್ಯಾರ್ಥಿನಿ ಫಲಿತಾಂಶ ಬರುವ ಮೊದಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.30 ರ ಗುರುವಾರ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಂಕರನಾರಾಯಣ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ, ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮ ದ ಒಡ್ಡನಗದ್ದೆ ಬಾಬಣ್ಣ ಕುಲಾಲರ ಮಗಳು ಮಾನಸ (17) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ. ಎಪ್ರಿಲ್ ತಿಂಗಳ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದು ಮನೆಯಲ್ಲಿಯೇ ಇದ್ದು ಜೂನ್ ತಿಂಗಳ ಸಪ್ಲಿಮೆಂಟರಿ ಪರೀಕ್ಷೆಗೆ ಕಟ್ಟಿದ್ದು, ಜೂನ್ ೩೦ ರಂದು ಪ್ರಥಮ ಪಿಯುಸಿಯ ಫಲಿತಾಂಶವಾಗಿದ್ದರಿಂದ ಮಾನಸಳು ತಾನು ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಬಹುದು ಎಂದು ಭಯಪಟ್ಟೂ ಗುರುವಾರ ಮನೆಯಲ್ಲಿ ಯಾರೂ ಇಲ್ಲದ ಸಮಯ ತನ್ನ ಮನೆಯ ಬಳಿ ಇರುವ ಹುಲ್ಲು ಹಾಕುವ ಕೊಟ್ಟಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ ತಾಲೂಕಿನ ಹಲವೆಡೆ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಮಧ್ಯ ರಾತ್ರಿ 1.15 ರ ಸುಮಾರಿಗೆ ಗಾಢ ನಿದ್ರೆಯಲ್ಲಿದ್ದ ಜನರನ್ನು ಕಂಪನ ಹಾಗೂ ಶಬ್ದ ಬಡಿದೆಬ್ಬಿಸಿ ಆತಂಕಕ್ಕೆ ನೂಕುವಂತೆ ಮಾಡಿದೆ. ಕಳೆದೊಂದು ವಾರದಿಂದ ಮೂರು ಬಾರಿ ಭೂಮಿ ಕಂಪಿಸಿ ಆತಂಕ ಸೃಷ್ಟಿಯಾದ ಅದೇ ಪರಿಸರದಲ್ಲಿ ಶುಕ್ರವಾರ ಶನಿವಾರದ ನಡುವಿನ ಮಧ್ಯರಾತ್ರಿ ವೇಳೆಗೆ ಮತ್ತೆ ಭೂಕಂಪನವಾಗಿದೆ.ಮಧ್ಯ ರಾತ್ರಿ 1.15 ರ ಸುಮಾರಿಗೆ ಈ ಕಂಪನ ಉಂಟಾಗಿದ್ದು ಆರಂಭದಲ್ಲಿ ದೊಡ್ಡ ಶಬ್ದ ಕೇಳಿತು. ಬೆನ್ನಿಗೇ ಅಲುಗಾಡಿದ ಅನುಭವವಾಯಿತು ಎಂದು ಜನ ಹೇಳಿಕೊಂಡಿದ್ದಾರೆ. ಕೆಲವರಿಗೆ ಒಂದೆರಡು ಸೆಕೆಂಡುಗಳ ವ್ಯತ್ಯಾಸದಲ್ಲಿ ಎರಡು ಬಾರಿ ಈ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.ಸಂಪಾಜೆ, ಚೆಂಬು, ತೊಡಿಕಾನ, ಪೆರಾಜೆ, ಬಡ್ಡಡ್ಕ, ಸುಳ್ಯ, ಉಬರಡ್ಕ, ಎಲಿಮಲೆ, ಗುತ್ತಿಗಾರು ಪರಿಸರಗಳಲ್ಲಿ ಈ ಕಂಪನದ ಅನುಭವವಾಗಿದೆ.ಕಳೆದ ಎರಡು ವಾರಗಳಲ್ಲಿ ಇದು ನಾಲ್ಕನೇ ಬಾರಿಯ ಕಂಪನವಾಗಿದ್ದು ಕಂಪನದ ತೀವ್ರತೆ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನೂತನ ಡಿಸಿಪಿ(ಕಾನೂನು ಹಾಗೂ ಸುವ್ಯವಸ್ಥೆ)ಯಾಗಿ ಅನ್ಷು ಕುಮಾರ್ ಅವರು ನೇಮಕಗೊಂಡಿದ್ದಾರೆ. ಉಡುಪಿ ಜಿಲ್ಲೆಯ ಕರಾವಳಿ ಕಾವಲುಪಡೆಯ ಎಸ್ಪಿಯಾಗಿರುವ ಅನ್ಶು ಕುಮಾರ್ 2018ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ. ತಕ್ಷಣದಿಂದೇ ಅವರು ಅಧಿಕಾರ ವಹಿಸಿಕೊಳ್ಳುವಂತೆ ಸರಕಾರ ಆದೇಶಿಸಿದೆ.
ಮಂಗಳೂರು: ನಗರದಲ್ಲಿ ಇಂದು ಬೆಳಗ್ಗಿನಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ವಿಮಾನ ಹಾರಾಟದಲ್ಲೂ ವ್ಯತ್ಯಯವಾಗಿದೆ.ಬೆಂಗಳೂರು, ಹೈದರಾಬಾದ್ ನಿಂದ ಆಗಮಿಸುವ ವಿಮಾನಗಳು ತಡವಾಗಿ ಬಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಬೆಂಗಳೂರಿನಿಂದ ಟೇಕ್ ಆಫ್ ಆಗಿರುವ ಈ ವಿಮಾನವು 16 ನಿಮಿಷ ತಡವಾಗಿ ಲ್ಯಾಂಡ್ ಆಗಮಿಸಿದೆ. ಹೈದರಾಬಾದ್ ನಿಂದ ಆಗಮಿಸಿರುವ ವಿಮಾನವು 7 ನಿಮಿಷ ವಿಳಂಬವಾಗಿ ಲ್ಯಾಂಡ್ ಆಗಿದೆ. ಮಂಗಳೂರಿನಿಂದ ಕೋಲ್ಕತ್ತಾಗೆ ತೆರಳುವ ವಿಮಾನವ 50 ನಿಮಿಷ ತಡವಾಗಿ ಟೇಕಾಫ್ ಆಗಿದೆ.
ಮಂಗಳೂರು: ಪಡೀಲು ಮತ್ತು ಮಂಗಳೂರು ಜಂಕ್ಷನ್ ವಿಭಾಗದ ನಡುವೆ (181/200 ಕಿ.ಮೀ.) ಬೆಳಗ್ಗೆ 9ಗಂಟೆ ಸುಮಾರಿಗೆ ಗುಡ್ಡ ಕುಸಿತವಾಗಿದೆ. ಪರಿಣಾಮ ಇಂದು ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ರೈಲು ನಂ.06488 ಸುಬ್ರಹ್ಮಣ್ಯ ರಸ್ತೆ – ಮಂಗಳೂರು ಸೆಂಟ್ರಲ್ ಅನ್ ರಿಸರ್ವ್ಡ್ ಎಕ್ಸ್ಪ್ರೆಸ್ ವಿಶೇಷ ಸಂಚಾರ ಇಂದು ರದ್ದುಗೊಂಡಿದೆ. ಅದೇ ರೀತಿ ರೈಲು ಸಂಖ್ಯೆ.06489 ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರಸ್ತೆ ಕಾಯ್ದಿರಿಸದ ಎಕ್ಸ್ಪ್ರೆಸ್ ವಿಶೇಷ ಸೇವೆಯನ್ನು ಇಂದು ರದ್ದುಗೊಳಿಸಲಾಗಿದೆ. ರೈಲು ಹಳಿಯ ಮೇಲೆ ಅಲ್ಪ ಪ್ರಮಾಣದ ಮಣ್ಣು ಬಿದ್ದಿರುವ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ತಕ್ಷಣದಿಂದಲೇ ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ದುರಸ್ತಿ ಕಾಮಗಾರಿ ಮುಗಿದ ತಕ್ಷಣ ಮತ್ತೆ ರೈಲು ಸಂಚಾರ ಸೇವೆ ಎಂದಿನಂತೆ ನಡೆಯಲಿದೆ.
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು ಮತ್ತು ಸಿಬಂದಿಯ ಬಾಕಿ ವೇತನ ಪಾವತಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಗಳಲ್ಲಿ ಚರ್ಚಿಸಿದ್ದು ಮನವಿಗೆ ಸೂಕ್ತವಾಗಿ ಸ್ಪಂದಿಸಿದ್ದಾರೆ. ಎಡಿಸಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪರಿಶೀಲನ ಸಮಿತಿ ರಚಿಸಿ ಆಸ್ಪತ್ರೆಗೆ ಅವಶ್ಯ ಇರುವ ವೈದ್ಯಾಧಿಕಾರಿ, ಸಿಬಂದಿವರ್ಗ ನೇಮಿಸುವುದು ಹಾಗೂ ಸಿಬಂದಿಗೆ ಬಾಕಿ ಇರುವ ವೇತನ ಪಾವತಿಯ ಬಗ್ಗೆ ವರದಿ ತಯಾರಿಸಲಾಗಿದೆ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಮಂಗಳೂರು: “ಕಳೆದ ರಾತ್ರಿಯಿಂದ ಮಳೆ ಬಿರುಸು ಪಡೆದಿದ್ದು, ಮಳೆ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಕ್ಕಳು ಶಾಲೆಗೆ ಬರಲು ಅನಾನುಕುಲವಾದ ಪ್ರದೇಶದ ವಿದ್ಯಾರ್ಥಿಗಳಿಗೆ ಇಂದು ರಜೆ ಸಾರಲಾಗಿದೆ” ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ. ಆದರೆ ಈಗಾಗಲೆ ಮಕ್ಕಳು ಶಾಲೆಗಳಿಗೆ ಬಂದಿದ್ದಲ್ಲಿ ಎಲ್ಲಾ ಮುಂಜಾಗೃತೆ ವಹಿಸಿ ಎಂದಿನಂತೆ ಕಾರ್ಯ ನಿರ್ವಹಿಸಲು ಹಾಗೂ ಮಕ್ಕಳು ಶಾಲೆಗೆ ಬರಲು ಅನಾನುಕುಲವಾದ ಪ್ರದೇಶದಲ್ಲಿ ಆ ಮಕ್ಕಳಿಗೆ ಒಂದು ದಿನ ರಜೆ ಸಾರುವಂತೆ ಹಾಗೂ ಶಿಕ್ಷಣ ಇಲಾಖಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಕಟ್ಟೆಚ್ಚರ ವಹಿಸುವಂರೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.ವಿದ್ಯಾರ್ಥಿಗಳು ಈಗಾಗಲೇ ಶಾಲೆಗೆ ಬಂದರೆ ಅವರನ್ನು ವಾಪಸ್ ಕಳುಹಿಸುವ ಮತ್ತು ತರಗತಿಗಳನ್ನು ಮುಚ್ಚುವ ಅಗತ್ಯವಿಲ್ಲ ಎಂದು ಡಿಸಿ ಸ್ಪಷ್ಟವಾಗಿ ಸೂಚಿಸಿದ್ದಾರೆ.ತಾಲ್ಲೂಕುಗಳಲ್ಲಿ, ತಹಶೀಲ್ದಾರ್, ಶಿಕ್ಷಣ ಅಧಿಕಾರಿಗಳಿಗೆ ಗಳಿಗೆ ಪರಿಸ್ಥಿತಿಯನ್ನು ಅವಲೋಕಿ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ ಎಂದು ಡಿಸಿ ತಿಳಿಸಿದ್ದಾರೆ.ಇನ್ನು ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ತೀವ್ರವಾದ ಮಳೆ ಹಿನ್ನಲೆ ರಜೆ ಘೋಷಿಸಲಾಗಿದೆ.