ಬೆಳ್ತಂಗಡಿ: ಕಾಂಕ್ರೀಟ್ ಮಿಕ್ಸಿಂಗ್ ಲಾರಿಯೊಂದು ವಿದ್ಯುತ್ ತಂತಿಗಳಿಗೆ ಸಿಲುಕಿದ ಘಟನೆ ನಾಲ್ಕೂರು ಗ್ರಾಮದ ಸೂಳಬೆಟ್ಟು ಎನ್ನುವಲ್ಲಿ ಬುಧವಾರ ತಡರಾತ್ರಿ ನಡೆದಿದೆ.
![](https://policepatrikekarnataka.com/wp-content/uploads/2024/06/WhatsApp-Image-2024-06-03-at-2.00.46-PM.jpeg)
![](https://policepatrikekarnataka.com/wp-content/uploads/2024/04/rohan-corp1.jpeg)
![](https://policepatrikekarnataka.com/wp-content/uploads/2024/04/rohan-corp2.jpeg)
![](https://policepatrikekarnataka.com/wp-content/uploads/2024/04/rohan-corp3.jpeg)
![](https://policepatrikekarnataka.com/wp-content/uploads/2024/04/rohan-corp4.jpeg)
ವೇಣೂರು- ಅಳದಂಗಡಿ ರಸ್ತೆಯಲ್ಲಿನ ಸೂಳಬೆಟ್ಟು ಎಂಬಲ್ಲಿ ಲಾರಿಯ ಚಾಲಕ ಮೇಲ್ಭಾಗದಲ್ಲಿದ್ದ ವಿದ್ಯುತ್ ತಂತಿಗಳನ್ನು ಗಮನಿಸದೆ ಚಲಾಯಿಸಿದ್ದರಿಂದ ತಂತಿಗಳು ವಾಹನಕ್ಕೆ ಸಿಲುಕಿವೆ.
ಅದು ಚಾಲಕನ ಗಮನಕ್ಕೆ ಬಾರದೆ ಆತ ಏಕಾಏಕಿ ಮುಂದೆ ಸಾಗಿದ್ದಾನೆ. ಇದರಿಂದ ತಂತಿಗಳೊಂದಿಗೆ ಎರಡು ಜೋಡಿ ಕಂಬಗಳು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದವು. ತಂತಿಗಳ ಘರ್ಷಣೆಯಿಂದ ಭಾರೀ ಬೆಂಕಿ ಕಾಣಿಸಿತ್ತು. ಕಾರ್ಕಳದ ಗುತ್ತಿಗೆ ಕಂಪೆನಿಯೊಂದರ ಲಾರಿಯಾಗಿದ್ದು, ಅದನ್ನು ಅಳದಂಗಡಿಯಲ್ಲಿ ತಡೆಹಿಡಿಯಲಾಗಿದೆ. ಚಾಲಕ ಕುಷ್ಟಗಿಯ ಕುಮಾರ್ನನ್ನು ವೇಣೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. ಸ್ಥಳಕ್ಕೆ ಮೆಸ್ಕಾಂ ಎಂಜಿನಿಯರ್, ವೇಣೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಾಹನಗಳ ಸಂಚಾರಕ್ಕೆ ಅಡಚಣೆ
ಘಟನೆಯಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. 15 ವಿದ್ಯುತ್ ಪರಿವರ್ತಕಗಳ ವ್ಯಾಪ್ತಿಯ 800ಕ್ಕಿಂತ ಅಧಿಕ ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಯಿತು. ಘಟನೆ ರಾತ್ರಿ ನಡೆದ ಕಾರಣ ಹಾಗೂ ತತ್ಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ.
ಘಟನೆಯಿಂದ ಮೆಸ್ಕಾಂಗೆ 70,000 ರೂ.ಗಿಂತ ಅಧಿಕ ನಷ್ಟ ಉಂಟಾಗಿದ್ದು, ಅದನ್ನು ಗುತ್ತಿಗೆ ಕಂಪೆನಿ ವತಿಯಿಂದ ಭರಿಸಲಾಗುವುದು ಎಂದು ಠಾಣೆಯಲ್ಲಿ ಮುಚ್ಚಳಿಕೆ ಬರೆಸಲಾಗಿದೆ. ಸದ್ಯಕ್ಕೆ ಕಂಬಗಳು ಮುರಿದ ಜಾಗದಲ್ಲಿ ತಾತ್ಕಾಲಿಕ ವ್ಯವಸ್ಥೆ ಕೈಗೊಂಡಿದ್ದು, ವಿದ್ಯುತ್ ಪೂರೈಕೆ ಮಾಡಲಾಗಿದೆ.