ಮೂಡಿಗೆರೆ: ಇತ್ತೀಚಿಗೆ ಕುಂದಾಪುರದ ಅರಶಿನಗುಂಡಿ ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ದಾವಣಗೆರೆಯ ಶರತ್ ಸಾವನ್ನಪ್ಪಿದ್ದ ಈ ಘಟನೆ ನಡೆದ ಬಳಿಕವೂ ಪ್ರವಾಸಿಗರು ಜಲಪಾತಗಳಲ್ಲಿ ಅಪಾಯಕಾರಿಯಾಗಿ ಸೆಲ್ಫಿ, ರೀಲ್ಸ್ ಮಾಡುವುದು ಕಂಡುಬಂದಿದೆ. ಅಲ್ಲದೆ ಚಾರ್ಮಾಡಿ ಘಾಟಿಯಲ್ಲಿ ಇರುವ ಜಲಪಾತಗಳಲ್ಲಿ ಪ್ರವಾಸಿಗರು ಹುಚ್ಚಾಟ ನಡೆಸಿ ಸೆಲ್ಫಿ ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚಾಗಿದ್ದು, ಇದಕ್ಕೆಲ್ಲಾ ಕಡಿವಾಣ ಹಾಕಲು ಇದೀಗ ಜಲಪಾತದ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಚಾರ್ಮಾಡಿ ಜಲಪಾತಗಳ ಬಳಿ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಕುಣಿಯುತ್ತಿದ್ದ ಪ್ರವಾಸಿಗರು ಜಾರುವ ಬಂಡೆಗಳ ಮೇಲೆ ಹತ್ತಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದರು, ಅಷ್ಟು ಮಾತ್ರವಲ್ಲದೆ ರಸ್ತೆ ಮಧ್ಯೆ ಕುಣಿಯೋ ಧಾವಂತದಲ್ಲಿ ವಾಹನಗಳಿಗೂ ಅಡ್ಡ ಹೋಗುತ್ತಿದ್ದರು ಇದರಿಂದ ಒಮ್ಮೆ ರೋಗಿ ಹೊತ್ತ ಆಂಬುಲೆನ್ಸ್ ಕೂಡ ಪರದಾಟ ನಡೆಸಿತ್ತು, ಬಂಡೆ ಮೇಲಿಂದ ಬಿದ್ದು ಕೈ-ಕಾಲು ಮುರಿದುಕೊಂಡವರು ಇದ್ದಾರೆ, ಜಾರೋ ಬಂಡೆ ಕೆಲವರ ಜೀವಕ್ಕೂ ಸಂಚಾಕಾರ ತಂದಿದೆ. ಇದೀಗ ಜಲಪಾತಗಳ ಹೈವೆ ಪ್ಯಾಟ್ರೋಲ್ ಪೊಲೀಸರ ನಿಯೋಜನೆ ಮಾಡಲಾಗಿದ್ದು ಇಡೀ ದಿನ ಪೊಲೀಸರು…
Author: main-admin
ಮಂಗಳೂರು: ಮಳೆಪೀಡಿತ ಕರಾವಳಿ ಜಿಲ್ಲೆಗಳ ವೀಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಮಂಗಳೂರಿಗೆ ಆಗಮಿಸಿದರು. ನಗರದ ಏರ್ಪೋರ್ಟ್ನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ನೈತಿಕ ಪೊಲೀಸ್ ಗಿರಿ ನೆಪದಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಸೌಜನ್ಯ ಹತ್ಯೆ ಪ್ರಕರಣ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿದೆ. ಅದರೆ ಸೌಜನ್ಯಳ ಪೋಷಕರು ತನಿಖೆಯಿಂದ ಸಂತುಷ್ಟರಾಗಿಲ್ಲ, ಹಾಗಾಗಿ ಅವರು ಮರುತನಿಖೆ ಕೋರಿದ್ದಾರೆ. ಅದಕ್ಕಾಗಿ ಅವರು ಕೋರ್ಟ್ ಗೆ ಅಪೀಲ್ ಮಾಡಬೇಕಾಗುತ್ತದೆ. ಕಾನೂನಲ್ಲಿ ಯಾವುದಕ್ಕೆಲ್ಲ ಅವಕಾಶವಿದೆ ಅಂತ ನೋಡಬೇಕಾಗುತ್ತದೆ ಎಂದು ಹೇಳಿದರು. ಪ್ರಕರಣದಲ್ಲಿ ಸಿಬಿಐ ವರದಿಯನ್ನು ಈಗಾಗಲೇ ತಮಗೆ ತಲುಪಿಸಲಾಗಿದ್ದರೂ ಇನ್ನೂ ಓದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಡಬ : ಹನ್ನೊಂದು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಕುಂತೂರಿನ ರಾಜಿಕ್ ಎಂಬ ಆರೋಪಿಗೆ ಪುತ್ತೂರು ನ್ಯಾಯಾಲಯವು ಜೈಲು ಶಿಕ್ಷೆ ಘೋಷಿಸಿ ತೀರ್ಪು ನೀಡಿದೆ. 2012ರಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಕುಂತೂರಿನ ರಾಜಿಕ್, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಆ ಬಳಿಕ ಕೋರ್ಟ್ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ನ್ಯಾಯಾಲಯ ಈತನ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ನಾಲ್ಕು ತಿಂಗಳಿನ ಹಿಂದೆ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು 2ನೇ ಎಸಿಜೆ ಹಾಗೂ ಜೆಎಮ್ಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಯೋಗೇಂದ್ರ ಶೆಟ್ಟಿ ಆರೋಪಿಗೆ ಮೂರು ವರ್ಷ ಆರು ತಿಂಗಳು ಕಾರಾಗೃಹವಾಸ ಮತ್ತು 1500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಕಾಸರಗೋಡು: ನೀರಿನ ಹೊಂಡದಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನೀಲೇಶ್ವರ ಬಂಗಳದಲ್ಲಿ ಸೋಮವಾರ ಸಂಜೆ ನಡೆದಿದೆ. ಬಂಗಳ ಕರಿಕುಂಡುವಿನ ಅಲ್ಬಿನ್ ಸೆಬಾಸ್ಟಿಯನ್ (16) ಮೃತಪಟ್ಟವನು. ಸೋಮವಾರ ಸಂಜೆ ಸಹಪಾಠಿಗಳ ಜೊತೆ ಮನೆ ಸಮೀಪದ ಗಣಿಗಾರಿಕೆ ನಡೆಸಿದ್ದ ಸ್ಥಳದಲ್ಲಿ ಹೊಂಡದಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಈ ದುರಂತ ನಡೆದಿದೆ. ನೀರಿನಲ್ಲಿ ಮುಳುಗಿದ್ದ ವಿದ್ಯಾರ್ಥಿಗಾಗಿ ಶೋಧ ನಡೆಸಿದರೂ ಪತ್ತೆಯಾಗಲಿಲ್ಲ. ಮಂಗಳವಾರ ಬೆಳಿಗ್ಗೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಕಣ್ಣೂರಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ಕಣ್ಣೂರಿ ನಿಂದ ಆಗಮಿಸಿದ ಮುಳುಗು ತಜ್ಞರು ಶೋಧ ನಡೆಸಿ ಮೃತ ದೇಹವನ್ನು ಮೇಲಕ್ಕೆತ್ತಿದರು. ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿರಿಸಲಾಗಿದೆ.
ಮೂಡುಬಿದಿರೆ: ಮೂಡುಬಿದಿರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾವತಿ ಮತ್ತು ಇರುವೈಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾಂತಪ್ಪ ಅವರನ್ನು ದ.ಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ. ಅಮಾನತಗೊಳಿಸಿದ್ದಾರೆ. ಇರುವೈಲು ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಸಂಬಂಧಿಸಿ ಮುದ್ರಣವಾದ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಕಾರಣಕ್ಕೆ ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ಉಪ್ಪುಂದ ಸಮೀಪ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ಓರ್ವ ಮೃತಪಟ್ಟಿದ್ದರೆ ಮತ್ತೋರ್ವ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನಾಗೇಶ್ (29) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ. ಸಚಿನ್ ಎಂಬವರ ಮಾಲಕತ್ವದ ಮಾಸ್ತಿ ಮರ್ಲ ಚಿಕ್ಕು ಹೆಸರಿನ ದೋಣಿಯು ಅಲೆಗಳ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ ಮುಳುಗಡೆಯಾಗಿದೆ. ದೋಣಿಯಲ್ಲಿ ಒಟ್ಟು 8 ಮಂದಿ ಇದ್ದರು. ಉಳಿದವರಲ್ಲಿ ಕೆಲವರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಬೈಂದೂರು ತಹಸಿಲ್ದಾರ್ ಶ್ರೀಕಾಂತ್ ಹೆಗಡೆ, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಬೈಂದೂರ್ ಪೊಲೀಸ್, ಅಗ್ನಿಶಾಮಕ ದಳ, ಪೋಸ್ಟಲ್ ಗಾರ್ಡ್ , ಮೀನುಗಾರಿಕಾ ಸಹಾಯಕ ನಿರ್ದೇಶಕರು ಕುಂದಾಪುರ ಸುಮಲತಾ, ಮುಳುಗುತಜ್ಞ ದಿನೇಶ್ ಖಾರ್ವಿ ಹಾಗೂ ತಂಡ, ಬೈಂದೂರು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ್ ಖಾರ್ವಿ ಉಪ್ಪುಂದ ಮೊದಲಾದವರು ಆಗಮಿಸಿದ್ದರು. ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಂಗಳೂರು: ನಗರದ 17 ಅಧಿಕಾರಿಗಳು ಸೇರಿದಂತೆ ರಾಜ್ಯದ 45 ಡಿವೈಎಸ್ಪಿ/ಎಸಿಪಿಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ನಿನ್ನೆಆದೇಶ ಹೊರಡಿಸಿದೆ. ನಗರದ ಎಂ.ಎಚ್. ಮಂಜುನಾಥ್ ಚೌಧರಿ; ಸಿಸಿಬಿ, ಸಿ. ಬಾಲಕೃಷ್ಣ; ಕಬ್ಬನ್ಪಾರ್ಕ್ ಉಪವಿಭಾಗ, ಶಿವಾನಂದ್ ಎಚ್. ಚಲವಾದಿ; ಹಲಸೂರು ಗೇಟ್, ವಿ. ನಾರಾಯಣಸ್ವಾಮಿ; ಜಯನಗರ, ಎಚ್. ಕೃಷ್ಣಮೂರ್ತಿ; ಮಲ್ಲೇಶ್ವರ, ಪ್ರಿಯದರ್ಶಿನಿ ಸಾಣಿಕೊಪ್ಪ; ಮಾರತ್ತಹಳ್ಳಿ, ಕೆ.ವಿ. ಶ್ರೀಧರ್; ಬಿಎಂಟಿಎಫ್, ಎಂ. ಮುರುಗೇಂದ್ರಯ್ಯ; ಸಂಪಿಗೆಹಳ್ಳಿ, ಕಿಶೋರ್ ಭರಣಿ; ಬೆಂಗಳೂರು ಸಂಚಾರ ಪೂರ್ವ, ಕೆ.ಎಸ್. ನಾಗರಾಜ್; ಸಂಚಾರ ಈಶಾನ್ಯ, ಎನ್. ಚಂದನ್ಕುಮಾರ್; ವಿಜಯನಗರ, ಕೆ.ಎಸ್. ಪುಟ್ಟಮ್ಮ; ಸಂಚಾರ ಪಶ್ಚಿಮ, ಜಿ. ಅನುಷಾ; ಬೆಸ್ಕಾಂ, ಡಿ.ಎಸ್. ರಾಜೇಂದ್ರ; ಕರ್ನಾಟಕ ಲೋಕಾಯುಕ್ತ, ಜಿ. ವನಿತಾ; ಹೈಕೋರ್ಟ್ ವಿಚಕ್ಷಣಾ ದಳ, ಆರ್. ಪ್ರಕಾಶ್; ಶೇಷಾದ್ರಿಪುರ, ಮೇರಿ ಶೈಲಜಾ; ಯಶವಂತಪುರ. ಇವರನ್ನು ಸೇರಿದಂತೆ ರಾಜ್ಯದ ಡಿವೈಎಸ್ಪಿ/ಎಸಿಪಿಗಳನ್ನು ವರ್ಗಾವಣೆ ಮಾಡಲಾಗಿದೆ.
ಮಂಗಳೂರು: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸರ ಅಟ್ಟಹಾಸ ಮುಂದುವರಿದಿದೆ. ಮಂಗಳೂರಿನ ಖಾಸಗಿ ವೆಬ್ಸೈಟ್ ವರದಿಗಾರನ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ. ಕಾವೂರು ಬಳಿಯ ರೆಸ್ಟೋರೆಂಟ್ ಗೆ ಸ್ನೇಹಿತೆಯ ಜೊತೆ ಊಟಕ್ಕೆ ತೆರಳಿದ್ದ ವರದಿಗಾರ ಅಭಿಜಿತ್ ಊಟ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ನೀನು ಬ್ಯಾರಿಯಾ..? ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಹಿಂದೂ ಹುಡುಗಿ ಜೊತೆ ಏನು ಕೆಲಸ ಅಂತ ಪ್ರಶ್ನಿಸಿದ್ದಾರೆ. ಹಿಂದೂ ಯುವಕನನ್ನು ಮುಸ್ಲಿಂ ಎಂದು ತಿಳಿದು ಹಲ್ಲೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಗೆ ಅಭಿಜಿತ್ ದೂರು ನೀಡಿದ್ದು, ನಿಂದನೆ ಮಾಡಿ ಹಲ್ಲೆ ನಡೆಸಿದ ಕೋಟೇಕಾರು ನಿವಾಸಿ ಚೇತನ್ (37) ಹಾಗೂ ಯೆಯ್ಯಾಡಿ ನಿವಾಸಿ ನವೀನ್(43) ಅವರನ್ನು ಬಂಧಿಸಲಾಗಿದೆ. ಜುಲೈ 28ರ ರಾತ್ರಿ ಘಟನೆ ನಡೆದಿದ್ದು, ಇಂದು ಆರೋಪಿಗಳ ಬಂಧನವಾಗಿದೆ.
ಉಡುಪಿ: ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಅವ್ಯವಸ್ಥೆಗಳ ವಿರುದ್ಧ ಮಾತನಾಡಿದ್ದ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳುಹಿಸಿದವರ ವಿರುದ್ಧ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿನಿ ಪ್ರತಿಭಟನೆಯಲ್ಲಿ ಕಾಲೇಜಿನ ಅವ್ಯವಸ್ಥೆಗಳ ಹೇಳಿದ್ದಳು. ಈ ಹಿನ್ನೆಲೆ ಜು. 28 ರಂದು ಇನ್ಸ್ಟಾಗ್ರಾಮ್ನಲ್ಲಿ ಜಿಗರ್ ಕೋಬ್ರಾ ಎಂಬ ಹೆಸರಿನ ಖಾತೆಯಿಂದ ಬೆದರಿಕೆ, ಕೆಟ್ಟ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ. ಇದು ವಿದ್ಯಾರ್ಥಿನಿಯ ಮಾನಸಿಕ ನೆಮ್ಮದಿಗೆ ಭಂಗ ತಂದಿದೆ. ಈ ವಿಚಾರ ಹಿಂದೂ ಸಂಘಟನೆಗಳಿಗೆ ತಿಳಿದಿದೆ. ನಂತರ ಹಿಂದೂ ಸಂಘಟನೆಗಳು ಸಂದೇಶದ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎಸ್ಪಿ ಜೊತೆ ಸಮಾಲೋಚನೆ ಮಾಡಿದ ಬಳಿಕ ಕೆಟ್ಟ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದವರ ವಿರುದ್ಧ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರು: ಕದ್ರಿ ಶಿವಬಾಗ್ನ ಅಪಾರ್ಟ್ಮೆಂಟ್ನಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಐದನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ ನಡೆದಿದೆ. ಮೃತರನ್ನು ಅಡ್ಯಾರ್ ಮೂಲದ ಸಮಯ (21) ಎಂದು ಗುರುತಿಸಲಾಗಿದ್ದು, ಪ್ರಸ್ತುತ ಕದ್ರಿ ಶಿವಬಾಗ್ನಲ್ಲಿ ವಾಸವಾಗಿದ್ದಾರೆ. ಸಮಯ್ ಮನೆಯ ಬಾಲ್ಕನಿಯಲ್ಲಿ ಓದುತ್ತಿದ್ದಾಗ ಅವನ ತಾಯಿ ಕಾರು ತೊಳೆಯಲು ನೆಲಮಾಳಿಗೆಗೆ ಹೋಗುವಂತೆ ಹೇಳಿದ್ದಾರೆ. ಬಳಿಕ ಐದನೇ ಮಹಡಿಯ ಬಾಲ್ಕನಿಯಲ್ಲಿ ಸಮಯ್ ತನ್ನ ತಾಯಿಯೊಂದಿಗೆ ಮಾತನಾಡುತ್ತಿದ್ದ. ಮಾತನಾಡಲು ಬಗ್ಗಿದಾಗ ನೆಲಮಹಡಿಯಿಂದ ಆಯತಪ್ಪಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಳೆ ನೀರಿನಿಂದ ಬಾಲ್ಕನಿಯಲ್ಲಿ ನೆಲ ಒದ್ದೆಯಾಗಿತ್ತು ಎಂದು ತಿಳಿದು ಬಂದಿದೆ. ಸಮಯ್ ತಂದೆ ಸಿವಿಲ್ ಇಂಜಿನಿಯರ್ ಮತ್ತು ತಾಯಿ ಗೃಹಿಣಿ. ದಂಪತಿಗೆ ಇರುವ ಇಬ್ಬರು ಪುತ್ರರಲ್ಲಿ ಸಮಯ್ ಹಿರಿಯನಾಗಿದ್ದ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










